Friday 24 February 2012

ಫಕೀರನೊಬ್ಬನ ಸ್ವಗತವು...

ಆದರೂ.. ಆ ಪೇರಳೆಯ ಮರದ ಕೆಳಗೆ ಅಷ್ಟೊಂದು ತಂಬೆಲರು
ಚಿಮುಕಿಸಿ ಹೋದವರು ಯಾರು.. ಯಾಕಾಗಿ ಹುಡುಕುತ್ತೇನೆ ಅದನ್ನು?
ದೂರದ್ದ ಕಾಣಲು ದುರ್ಬೀನು ಉಂಟು.. ನೋಡುವ ಕಣ್ಣುಗಳದ್ದೇ ದಾಸ್ತಾನಿಲ್ಲ..
ಕಣ್ಣೆರಡನ್ನೂ ಇಲ್ಲೇ ಪೊಟರೆಯೊಳಗಿಟ್ಟು ಇರುವೆಮನೆಗಳನ್ನು
ತಡವಿಕೊಂಡು ನೆಲದ ಮೇಲೆ ಇರುವಿನ ತಾವು ಹುಡುಕುತ್ತಿದ್ದೆ..

ರೋಜಾಪಕಳೆಗಳನ್ನು ಕಾರಣವಿಲ್ಲದೆ ಕಿತ್ತು ತಿನ್ನುವ ಜನಗಳ ಬಾಯತುಂಬ
ಕಪ್ಪುರಕ್ತದ ಕಲೆ.. ಅವರತ್ತ ನೋಡಲು ಕಣ್ಣಪಾಪೆಗೆ ಖುಷಿಯಾಗುತ್ತದೆ..
ಎಲ್ಲಿಯೂ ಅಂಟದ ರಕುತದ ಕಲೆ ಬಾಯಿಗೆ ತುಟಿಗೆ ಕೆನ್ನೆಗೆ..
ಸತ್ತವನ ಮೇಲೂ, ಮದುವೆಯವಳ ಮೇಲೂ, ಸನ್ಮಾನದವನ ಮೇಲೂ
ಅದದೇ ಪಕಳೆಗಳು.. ಅವರ ಬಾಯೊಳಗೂ ಕಪ್ಪುರಕುತ

ಇತ್ತಿತ್ತಲಾಗಿ ಯಾರಾದರೂ ನನ್ನನ್ನೊಮ್ಮೆ ಕೊಂದು ಹಾಕಲಿ
ಅಂದುಕೊಳ್ಳುವೆ, ಯಾರೂ ಕೊಲ್ಲುವರಿಲ್ಲ..
ಪಾಳುಬಿದ್ದ ಬಾವಿಯೊಳಗೆ ನನ್ನ ಕಾಯವೂ ಇರಲಿ
ಬಾವಿಯೊಳಗಿನ ಕಸಕಡ್ಡಿ ಧೂಳು ಜೇಡಬಲೆಯ ಮಧ್ಯೆ
ಇದ್ದುಕೊಳ್ಳಲಿ ತೃಣಮಾತ್ರದ ಜೀವ.

ಇತ್ತಿತ್ತಲಾಗಿ ನನ್ನ ಅಪಧಮನಿಯ ಚೂರುಗಳನ್ನು
ಯಾರೋ ಬೊಗಸೆಯೊಳಗೆ ತುಂಬಿಕೊಂಡು ಹೋದಂತೆ
ಸ್ವಪುನ ಬಿದ್ದು ಭಯದಿಂದ ಕುಣಿಯುವಂತಾಗುತ್ತದೆ,
ಕುಣಿಯುವಾಗ ಕಾಲಾದರೂ ಎರಡು ಸೀಳಾಗಬಾರದೇ
ಅತ್ತೊಂದಿತ್ತೊಂದು ಎಸೆದು ಚಲನೆಯಿಲ್ಲದೆ ಕೊರಡಾಗುವೆ.
: - ಟಿ.ಕೆ. ದಯಾನಂದ

No comments:

Post a Comment