Monday 12 March 2012

ತುಫಾಕಿ ಕೊಳವೆಯೊಳಗೆ ಮೀನು..

ನೆನಪಿನ ಪಾತಾಳಗರಡಿಯ ಕೊಕ್ಕೆಗೆ ಸಿಕ್ಕಿದೆ ಸತ್ತ ನಕ್ಷತ್ರ
ಹಿಂದೊಮ್ಮೆ ನಗ್ನ ಮೆರವಣಿಗೆಯೊಳಗೆ ನಡೆದೂ ನಡೆದೂ,
ಐದೂ ತಲೆಗಳ ಚೂಪು ಈಗ ಮೊಂಡು ಮೊಂಡು..
ಜೀವನಕ್ಷತ್ರದ ಚೆಲುವು ಬಿನ್ನಾಣಗಳ ಮೇಲೆ ಬರೆದವರು
ಸತ್ತ ನಕ್ಷತ್ರದ ಎದೆಮೇಲೆ ಆಗಷ್ಟೇ ಮಸೆದ ಚೂರಿಯಿಡುತ್ತಾರೆ,

ಅತ್ತ ಬೆವರು ನುಂಗಿದ ಭೂಮಿ, ತೆನೆ ಉಗುಳಲಿಲ್ಲವಾಗಿ..
ಒಂದುಕಾಲದ ಅಂದಗತ್ತಿಯರು ನೆಲದ ಹೊಕ್ಕಳು ಮುಟ್ಟುತ್ತ,
ಚಿಗುರು ದೇವತೆಯರಿಗೂ ಮೊಳಕೆ ದೇವರುಗಳ ಕರೆದು,
ಮೋಡ ದೇವಳಗಳತ್ತ ಮಂಡಿಯೂರಿ ಪ್ರಾರ್ಥಿಸುತ್ತಾರೆ ..
ಕವುಚಿಬಿದ್ದ ಬದುಕು ನೆಲಕ್ಕಪ್ಪಳಿಸಿದ ಸದ್ದು ಅವರಿಗೆ ಕೇಳುತ್ತಿಲ್ಲ.

ಅಗ್ಗಿಷ್ಟಿಕೆಯ ಹಳದಿಬೆಳಕಿನಲ್ಲಿ ತಂಪು,ಬೆಚ್ಚಗಿನ ಅನುಭೂತಿಗಳು,
ಕೈ ಕೈ ಹಿಡಿದು ನರ್ತಿಸುತ್ತಿವೆ.. ಸುಡಬೇಕಿದ್ದ ಬೆಂಕಿಯೇ ಗೈರು,
ಇರಾದೆಗಳ ತುಫಾಕಿ ಕೊಳವೆಯೊಳಗೆ ನೀರು ತುಂಬಿ ಮೀನಿಟ್ಟೆ..
ಭಯದಿಂದ ಒಳಹೋದ ಮೀನುಗಳು ಇನ್ನೂ ಹಿಂತಿರುಗಿಲ್ಲ..
ತುಫಾಕಿಯ ಗಂಧಕ ಖಾಲಿಯಾಗಿರಲಿ, ಚಿಮ್ಮದಿರಲಿ ಗುಂಡು.

ಡಾಂಬರು ರಸ್ತೆಯೊಂದರ ಮೇಲೆ ಬಿಮ್ಮನಸಿಯೊಬ್ಬಳು
ಬಸುರ ಯಾತನೆಯ ಉದ್ದಕ್ಕೆ ಹಾಸಿಕೊಂಡು ಕುಳಿತಿದ್ದಾಳೆ.
ಗರ್ಭಕಟ್ಟಿದ ಅವಳ ಹೂವಿನ ಕಾಡೊಳಗೆ ಜೀವವಿಲ್ಲದ ಕೂಸು
ತಲೆಗೆದರಿಕೊಂಡು ತೇಲುತ್ತಿದೆ.. ಗಾಯಗೊಂಡ ಮೌನ,
ಅವಳು ಕಟ್ಟಿದ ಸುಣ್ಣದಗೂಡಿನ ಇಟ್ಟಿಗೆಗಳಿಗೆ ಬಣ್ಣವೇ ಇರಲಿಲ್ಲ..

ಮೃದ್ವಂಗಿಯೊಂದು ಚಲಿಸುತ್ತಿದೆ.. ಪಾದವೂರಿದ ಕಡೆ ಪ್ರಪಾತ
ಹನಿದ ಪುಡಿಮಳೆಗೆ ಪ್ರಪಾತದೊಳಗೂ ಕೆರೆಯರಳಿ..
ಜೀವನಕ್ಷತ್ರಗಳು ಮಿಸುಕಾಡುತ್ತವೆ, ಅಂದಗತ್ತಿಯರ ವದನವೂ ಅರಳಿ,
ತುಫಾಕಿಯೊಳಗೆ ನುಗ್ಗಿದ ಮೀನುಗಳೂ ಹೊರಬಂದು..
ರಸ್ತೆ ಪಕ್ಕದ ಬಿಮ್ಮನಸಿಗೆ ನಡುರೋಡಲ್ಲೇ ಸತ್ತಕೂಸು ಹುಟ್ಟಿದೆ.

-ಟಿ.ಕೆ. ದಯಾನಂದ

Sunday 11 March 2012

ಒಂದು ಕವುದಿ ಕಾವ್ಯ....

ಇದೆಕೋ ಎನ್ನಲು ಖಂಡವೂ ಇಲ್ಲ, ಬಿಸುಪು ತುಂಬಿದ ಮಾಂಸವೂ ಇಲ್ಲ
ಮೂರಿಂಚಿನ ಸೂಜಿ.. ಪೋಣಿಸಿದ ಮಾರುದ್ದ ನೈಲಾನು ದಾರ
ನಡೆಯುತ್ತವೆ ಸೀಳಿದ ಕಾಲುಗಳು ಬೆರಳುಗುರುಗಳೊಟ್ಟಿಗೆ ಮಾತನಾಡುತ್ತ..
ಹವಾಯಿ ಚಪ್ಪಲಿಗೂ ಕವುದಿಯವಳ ಕಪ್ಪುಕಾಲಿಗೂ ಜನ್ಮಾಂತರದ ಶತ್ರುತ್ವ.

ಕರೆದವರ ಮನೆ ಜಗುಲಿಯೊಳಗೆ ಚೀಲ ಬಿಚ್ಚಿ ಹರವುತ್ತದೆ ಜೀವ,,
ಪುಡಿಬಟ್ಟೆಗಳು, ಹೊಗೆಸೊಪ್ಪಿನ ತುಂಡು, ಸುಣ್ಣದ ಡಬ್ಬಿ.
ಗುಂಡುಜಗತ್ತೇ ಮಲಗಿದೆ ಕವುದಿಯವಳ ಚೀಲದೊಳಗೆ ಸೊಟ್ಟಪಟ್ಟಗೆ
ಬದುಕ ಕಟ್ಟಬಹುದೇ ಹೀಗೆ.. ಕವುದಿಯವಳ ಗೋಣಿಚೀಲದೊಳಗೆ?

ಚೂರುಡೊಂಕು ಸೂಜಿಯೊಳಗೆ ನೈಲಾನು ನೂಲು ನುಗ್ಗಿಸುತ್ತಾಳೆ..
ಮೀನು ಮೊಟ್ಟೆಯಿಟ್ಟಂತೆ.. ಮಿಡತೆ ಠಂಗನೆಗರಿದಂತೆ ಸುನೀತವಾಗಿ..
ಇಲ್ಲಿ ತೂರಿದ ಸೂಜಿ ಮೋಡವೊಂದನ್ನು ಮುಟ್ಟಿ ಮತ್ತೆ ವಾಪಸ್ಸು,
ಈ ಬಾರಿ ಬೆಚ್ಚಿಬಿದ್ದದ್ದು ನೆಲಕ್ಕೆ ಮೆತ್ತಿಕೊಂಡ ಪಾರ್ಥೇನಿಯಂ ಗಿಡ..

ಕವುದಿಯವಳ ಮೌನದೊಳಗೆ ಕೈಕಾಲಿಲ್ಲದ ಕತೆಗಳು ಮಿಸುಕಾಡುತ್ತವೆ..
ಹೊಲೆವ ಕೌದಿಯ ಗ್ಯಾನದಲ್ಲಿ ಇಂದೂ ಅವಳಿಲ್ಲ.. ಸೂಜಿ ಮತ್ತು ನೂಲು ಮಾತ್ರ,
ಎದೆಯೆತ್ತರದ ಮಗನನ್ನು ತಿರುವಿ ಮಲಗಿಸಿದ ಎಂಡೋ ಸಲ್ಫಾನಿನ ಧೂಳು
ಇವಳ ಮಸ್ತಿಷ್ಕದೊಳಗೆ ದುರಂತಕತೆಗಳ ಮೊಟ್ಟೆಯಿಡುತ್ತಿದೆ.

ಹೊಲೆದ ಕವುದಿಗೆ ಕೊಟ್ಟಷ್ಟೇ ಕಾಸು.. ಚೌಕಾಶಿಗೂ ತಾವಿಲ್ಲ.
ಊರ ದೇಹಗಳು ಬೆಚ್ಚಗಿವೆ ಇವಳ ಕವುದಿ ಹೊದ್ದು..
ತಲೆಮೇಲೆ ಹತ್ತಿಕುಳಿತ ಸರಂಜಾಮುಗಳ ಮೂಟೆಯೊಳಗೆ
ಬದುಕೇ ಸಾವಿನೊಟ್ಟಿಗೆ ಚೌಕಾಶಿಗೆಳಸಿದ್ದು.. ನೈಲಾನುದಾರಕ್ಕೆ ಮಾತ್ರ ಗೊತ್ತು

ಯಾರೋ ಬೆಳೆದ ತೆನೆಗೆ ಯಾರದ್ದೋ ಔಷಧ ಸಿಂಪಡಿಸಿದರೆ..
ಇವಳ ಮಗನ ಕೈಕಾಲೇಕೆ ತಿರುಚಿಕೊಂಡವೋ..
ಚಟ್ಟದ ಮೇಲೆ ಮಲಗಿದ್ದ ನ್ಯಾಯದೇವತೆಯ ಬಾಯನ್ನು ಹೊಲೆಯಲಾಗಿದೆ,
ಹೊಲಿಗೆ ಬಿಚ್ಚುವ ಬಗೆಯ ಬಲ್ಲವಳು ತನ್ನ ಪಾಡಿಗೆ ಕವುದಿ ಹೊಲೆಯುತ್ತಾಳೆ.

- ಟಿ.ಕೆ. ದಯಾನಂದ


Friday 9 March 2012

ಮೆಹೂವಾ ಕಾಡು ಮತ್ತು ಪುಡಿ ನಕ್ಷತ್ರಗಳು

ಪ್ಲಾಸ್ಟಿಕ್ಕು ಹೂವುಗಳ ಬೆನ್ನೊಳಗೆ ಘಮವನ್ನು ಹುಡುಕುತ್ತಿದ್ದೆ,
ಮೂಸಿದರೂ, ಮುಟ್ಟಿದರೂ ತೇವವಿಲ್ಲದ ಪ್ಲಾಸ್ಟಿಕ್ಕು ಹೂವಿಗೆ
ಕೊನೆಯಪಕ್ಷ ರಾಗಿಕಾಳಿನಷ್ಟು ನಾಚಿಕೆಯೂ ಆಗುವುದಿಲ್ಲ..
ಇನ್ನು ಬದುಕಬೇಕೆಂಬ ಭಯ ನನ್ನೊಳಗೆ ಚಿಗಿತ ಚಣದಲ್ಲೇ,
ಅವಳ ಕೊರಳ ಸುತ್ತಲೂ ಮಾಂತ್ರಿಕಬೀಜಗಳನ್ನು ಚೆಲ್ಲಿದ್ದೆ..
ಕೊರಳೊಳಗೆ ಬೇರಿಳಿಸಿ ಕಣ್ಣೆತ್ತಿವೆ ಮತ್ತಿನ ಮೆಹೂವಾ ಹೂಗಳು.


ಮೆಹೂವಾದ ಮತ್ತಿಗೆ ನನ್ನೊಳಗೆ ಪದಗಳು ಹುಟ್ಟುತ್ತವೆ
ಹುಟ್ಟಿದ ಪದಗಳು ಉಸಿರು ಸಿಗದೆ, ನೆಲದ ತಾವೂ ಸಿಗದೆ
ಸಾಯುವ ಮೊದಲೇ, ಇವಳು ಪದಗಳಿಗೆ ಕುಲಾವಿ ನೇಯುತ್ತಾ..
ನೆತ್ತಿ ನೇವರಿಸುವ ನಿಷ್ಕಾರುಣ ಮೌನದ ಹಾಡು ಕೇಳುತ್ತ,
ನಾಯಿಕೊಡೆಯ ನೆರಳಪ್ಪಿಕೊಂಡು ಪ್ರೇಮವನ್ನು ಧ್ಯಾನಿಸುತ್ತಾ,
ರದ್ದಿವ್ಯಾಪಾರಿಯ ತಕ್ಕಡಿಯೊಳಗೆ ನನ್ನನ್ನು ಕೂರಿಸಿದ್ದಾಳೆ.

ಈಗೀಗ ಕೆಂಪುನೆಲವನ್ನು ಚುಂಬಿಸುವ ನೆಪದಲ್ಲಿ
ಭೂಮಿಯ ಸೊಂಟದಳತೆ ತೆಗೆಯಲು ಅಳತೆಗೋಲಿಗಾಗಿ
ಪರಿತಪಿಸುವವರ ಸಾಲುಸಾಲು ಸಾವಾಗುತ್ತಿವೆ..
ಪುಣ್ಯದ ಬಂಡವಾಳ ಹಾಕಿ ಪಾಪದ ಬೆಳೆ ಬೆಳೆಯುವವರ
ನಡುನೆತ್ತಿಯ ಮೇಲೆ ಒಂಟಿಕಾಲೂರಿ ನಿಂತ ಇವಳ ಪ್ರೇಮ..
ನನ್ನೊಳಗಿನ ರಕ್ಕಸನನ್ನು ತುಂಬುಗಣ್ಣಿನಲ್ಲಿ ಮೋಹಿಸುತ್ತಿದೆ.

ಅವಳ ಎರೆಹುಳುವಿನಂಥ ಒಂಟಿಕಾಲಿನ ಪ್ರೇಮದೆದುರು
ಯಾವತ್ತೋ ಸತ್ತ ಸೌದೆಯ ಬೂದಿಯಂತೆ ಹುಡಿ ಹುಡಿಯಾಗುವ ಆಸೆ,
ನನ್ನೊಳಗಿನ ಭೂಮಿಗೆ ಹೆಡೆಮುರಿಗೆ ಕಟ್ಟಿ ಎಳೆತಂದಿದ್ದಾಳೆ
ಕೆನೆಯುವ ಸೂರ್ಯನನ್ನು, ಅಮೂರ್ತ ಮೋಡಗಳನ್ನು, ಪುಡಿ ನಕ್ಷತ್ರಗಳನ್ನು,
ಮೆಹೂವಾ ಹೂಗಳ ಮದ್ಯವನ್ನು ಮೊಗೆಮೊಗೆದು ಕುಡಿದವಳು
ಪಿಸುಗುಡುತ್ತಾಳೆ, ಮೊಣಕಾಲೂರದೇ ಬೇರೆ ರಸ್ತೆಯಿಲ್ಲವೋ ಹುಡುಗ.

ಪಿಸುಮಾತಿಗೆ ಇಲ್ಲವೆಂದು ಅಂದು ಹೆಣದಂತೇಕೆ ಓಡಾಡಲಿ ಗೆಳತಿ..?
ಮಂಡಿ ಮೊಣಕಾಲೆರಡನ್ನೂ ನಿನ್ನೆದುರಿನ ಮಣ್ಣಿನ ವಶಕ್ಕೊಪ್ಪಿಸಿದ್ದೇನೆ..
ಇಗೋ ನಿನ್ನ ಮೋಡದೊಳಗವಿತ ನೀರಿನಂಥ ಪ್ರೇಮಕ್ಕೆ,
ನನ್ನ ಕೊರಳನೊಪ್ಪಿಸುತ್ತಿದ್ದೇನೆ.. ಇಲ್ಲೂ ನೆಡು.. ಮೆಹೂವಾ ಬೀಜಗಳ..
ಕೊರಳುಗಳ ಮೇಲೆ ಮೆಹೂವಾ ಕಾಡೊಂದು ಬೆಳೆದುಕೊಳ್ಳಲಿ..
ಆ ಕಾಡೊಳಗೆ ನಮ್ಮ ನಾಲಿಗೆಯಿಲ್ಲದ ಪ್ರೇಮ, ದಿಕ್ಸೂಚಿಯಿಲ್ಲದೆ ಅಲೆದಾಡಲಿ.

- ಟಿ.ಕೆ. ದಯಾನಂದ

Thursday 8 March 2012

ಫ್ರೂಟ್ ಮಾರ್ಕೆಟ್ಟಿನ ಅಮೀರುನ್ನೀಸಾಳ ಮಾತುಗಳು

11 ಮೇ 2011 ಕೆಂಡಸಂಪಿಗೆಯಲ್ಲಿ  ನನ್ನ ರಸ್ತೆ ನಕ್ಷತ್ರ ಕಾಲಂನಲ್ಲಿ ಪ್ರಕಟವಾಗಿದ್ದೂ...........................

"ಭಿಕ್ಷೆ ಬೇಡೋಕೆ ಮಾತ್ರೆ ತಿನ್ನಬೇಕು.. ಮಾತ್ರೆ ದುಡ್ಡಿಗೆ ಭಿಕ್ಷೆ ಬೇಡಬೇಕು’ ಎಂದು ಹೇಳುವ ಫ್ರೂಟ್ ಮಾರ್ಕೆಟ್ಟಿನ ಅಮೀರುನ್ನೀಸಾಳ ಕಥೆ "

ನಂಗೆ ಯಾರೂ ಇಲ್ಲ ಕಣಪ್ಪ.. ಗಂಡ ಬಿಟ್ಟೋಗಿಬಿಟ್ಟ.. ಎರಡು ಮಕ್ಕಳು.. ಮೊದ್ಲು ನಾನು ಭಿಕ್ಷೆ ಮಾಡ್ತಾ ಇರಲಿಲ್ಲ.. ಗಂಡ ಸತ್ತೋದ ಮೇಲೆ ನಾನೇ ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿ ಮಕ್ಕಳನ್ನ ಸಾಕಿ ಇಬ್ಬರಿಗೂ ಮದುವೆ ಮಾಡಿದೆ. ಅಲ್ಲಿತನಕ ಎಲ್ಲಾ ಚೆನ್ನಾಗೇ ಇತ್ತು... ಮಕ್ಕಳು ಮದ್ವೆ ಮಾಡ್ಕೊಂಡ ಮೇಲೆ ಸೊಸೆಯಂದಿರು ಇಬ್ಬರೂ ಈ ಮುದುಕಿ ಯಾಕೆ.. ಮನೆ ಬಿಟ್ಟು ಕಳಿಸಿಬಿಡಿ ಅಂತ ನನ್ನ ಮಕ್ಕಳ ತಲೆಕೆಡಿಸಿಬಿಟ್ರು.. ಅವಾಗ ನನ್ನ ಇಬ್ಬರೂ ಮಕ್ಕಳೂ ಸೇರಿಕೊಂಡು ನನ್ನ ಮನೆಯಿಂದ ಹೊರಗೆ ಹಾಕಿಬಿಟ್ರು.. ನಾನು ನಮ್ಮಕ್ಕನ ಮನೆಗೆ.. ಅದೇ ಮೈಸೂರ್ ರೋಡಲ್ಲಿ ಐತಲ್ಲ.. ಗುಡ್ಡದಳ್ಳಿಗೆ ಬಂದೆ.. ಅಕ್ಕನ ಮನೆಯಲ್ಲಿ ಒಂದಷ್ಟು ವರ್ಷ ಇದ್ದೆ.. ಈಗ್ಗೆ ೨ ವರ್ಷದ ಹಿಂದೆ ನಮ್ಮಕ್ಕನೂ ಸತ್ತೋಗಿಬಿಟ್ಳು.. ಕಳ್ಳೇ ಮಣ್ಣು ಸೇರಿಕೊಂಡ ಮೇಲೆ ಬಳ್ಳಿಗಳು ಏನ್ ಮಾಡ್ತವೆ ಹೇಳು..? ಅವಳ ಮಕ್ಕಳು ಮತ್ತೆ ನನ್ನನ್ನ ಈಚೆಗೆ ಓಡಿಸಿಬಿಟ್ರು.. ಆ ಮನೆಯಿಂದ ಈಚೆಗೆ ಬಂದ ಮೇಲೆ ನಾನು ಬಿದ್ದ ಪಾಡು ಒಂಡೆರಡಲ್ಲ.. ರೋಡಲ್ಲಿ ಮಲಗಿ, ಕ್ರಿಸೇನ್ಸ್‌ರ ಮಸಾಣದಲ್ಲಿ ಒಂದಷ್ಟು ದಿನ ಇದ್ದು.. ಒಂದೊಂದಲ್ಲ.. ಆಮೇಲೆ ಒಂದಿನ ಇನ್ಯಾರೂ ನನಗೆ ಇಲ್ಲ.. ನನ್ನನ್ನ ನಾನೇ ಸಾಕಿಕೊಳ್ಳಬೇಕು ಅಂತ ಅನ್ನಿಸಿಬಿಡ್ತು. ೧೫% ಬಡ್ಡಿಗೆ ಸಾಲ ತಗೊಂಡು ಇಲ್ಲೇ ಹಣ್ಣಿನ ಮಾರ್ಕೆಟ್ಟಲ್ಲಿ ಹಣ್ಣು ತಂದು ರೋಡಲ್ಲಿ ಗುಡ್ಡೆ ಇಟ್ಟುಕೊಂಡು ಮಾರಿಕೊಂಡು ಹೊಟ್ಟೆಪಾಡು ಮಾಡ್ತಾ ಇದ್ದೆ.

ಒಂದೆರಡು ತಿಂಗಳು ಆದ ಮೇಲೆ ಮಳೆಗಾಲ ಶುರುವಾಯ್ತು.. ಮಳೇನಲ್ಲಿ ಬೀದೀಲಿ ಕುಳಿತುಕೊಂಡು ಯಾಪಾರ ಮಾಡೋಕೆ ಆಗ್ತಾ ಇರಲಿಲ್ಲ.. ಗಿರಾಕಿಗಳು ಯಾರೂ ಬರ‍್ತಾ ಇರಲಿಲ್ಲ.. ನನಗೇ ಇರೋಕೆ ಅಂತ ಯಾವುದೇ ಜಾಗ ಇಲ್ಲ ಅಂದ್ಮೇಲೆ ಹಣ್ಣುಗಳನ್ನ ಇಟ್ಕೊಳೋಕೆ ಅಂಗಡಿ ಎಲ್ಲಿಂದ ಹಾಕ್ಲಿ.. ಜೊತೆಗೆ ಯಾರ‍್ಯಾರೋ ಬರೋರು ಕಾಸು ಕೊಡು ಇಲ್ಲಾಂದ್ರೆ ಅಂಗಡಿ ತೆಗಿ ಅಂತ ಜಗಳ ಮಾಡೋರು.. ಅವರಿಗೆ ಪೊಲೀಸಿನವರಿಗೆ ಕೊಟ್ಟೂ ಕೊಟ್ಟೂ ನನಗೇನೂ ಉಳೀತಾ ಇರಲಿಲ್ಲ.. ಹಂಗಾಗಿ ಹಣ್ಣಿನ ವ್ಯಾಪಾರ ಬರಕತ್ತಾಗಲಿಲ್ಲ.. ಲಾಸ್ ಆಗಿಬಿಡ್ತು.. ಬಡ್ಡಿಗೆ ಸಾಲ ತಗೊಂಡಿದ್ನಲ್ಲ.. ಅವ್ರು ಸಾಲ ಕೇಳೋಕೆ ಶುರು ಮಾಡಿದ್ರು.. ನಾನು ಹಿಂಗಿಂಗೆ ಮಳೆಗಾಲ ಸ್ವಾಮಿ.. ಯಾಪಾರ ಮಾಡೋಕೆ ಆಗ್ತಿರಲಿಲ್ಲ.. ಲಾಸಾಗೋಯ್ತು ಅಂತ ಹೇಳಿದೆ.. ಅವ್ರು ನನ್ನ ಮಾತು ಕೇಳಲಿಲ್ಲ.. ಏನಾದ್ರೂ ಮಾಡು.. ಭಿಕ್ಷೆ ಮಾಡು.. ತಿಂಗಳ ಬಡ್ಡಿ ಕಟ್ಟು ಅಂತ ಹೆದರಿಸಿದ್ರು.. ವಯಸ್ಸಾದೊಳು ಅಂತಾನೂ ನೋಡದಂಗೆ ಇಲ್ಲೇ ಈ ಸೇತುವೆ ಕೆಳಗೇನೆ ನಂಗೆ ಹೊಡೆದ್ರು.. ಈ ವಯಸ್ಸಲ್ಲಿ ಏನು ಕೆಲಸ ಮಾಡಲಿ.. ನಂಗೆ ಯಾರು ಕೆಲಸ ಕೊಡ್ತಾರೆ..? ಜೊತೆಗೆ ಬಡ್ಡಿಗ್ ಕೊಟ್ಟೋರು ನಂಗೆ ಹೊಡೆದ್ರಲ್ಲ.. ಅವಾಗಿಂದ ನನ್ನ ಕಾಲೆಲ್ಲ ಇಷ್ಟಿಷ್ಟು ದಪ್ಪ ಊದಿಕೊಂಡಿತ್ತು. ನಡೆದಾಡೋಕೆ ಆಗ್ತಾ ಇರಲಿಲ್ಲ.. ಇವಾಗಲೂ ಅದು ಸರಿ ಹೋಗಿಲ್ಲ.. ನೋಡಿಲ್ಲಿ.. ನನ್ನೂ, ನನ್ ಕಾಲನ್ನೂ ಬೇರೆ ಬೇರೆ ತೂಕ ಹಾಕಿದ್ರೆ ನನ್ ಕಾಲೇ ಜಾಸ್ತಿ ತೂಕ ಬತ್ತವೆ.. ಹಂಗೆ ಊದಿಕೊಂಡಿದಾವೆ.. ಸರಿ ಅಂತ ಇನ್ನೇನು ಮಾಡೋದು
ಭಿಕ್ಷೇನೇ ಬೇಡೋಣ ಅಂತ ತೀರ್ಮಾನಿಸಿದೆ..

ಇಲ್ಲೇ ಮಾರ್ಕೆಟ್ ಪಕ್ಕ ಇರೋ ಮಸೀದಿ ಹತ್ರ ಬುರ್ಖಾ ಹಾಕ್ಕೊಂಡು ಭಿಕ್ಷೆ ಬೇಡ್ತಾ ಇದ್ದೆ.. ಭಿಕ್ಷೆ ಬೇಡೋದು ಹೆಂಗೆ ಅಂತಾನೂ ನನಗೆ ಗೊತ್ತಾಗ್ತಾ ಇರಲಿಲ್ಲ.. ಆಮೇಲೆ ಅಕ್ಕ ಪಕ್ಕದಲ್ಲಿ ಭಿಕ್ಷೆ ಬೇಡ್ತಾ ಇದ್ದೋರು ಹಂಗಲ್ಲ ಕಣಮ್ಮ.. ಹಿಂಗೆ ಬುರ್ಖಾ ಹಾಕ್ಕೊಂಡು ಭಿಕ್ಷೆ ಬೇಡಿದ್ರೆ ಯಾರೂ ಭಿಕ್ಷೆ ಹಾಕಲ್ಲ.. ಬುರ್ಕಾ ತೆಗೆದು ಅಮ್ಮಾ ಅಮ್ಮ, ಸಲಾಮಾಲೇಕುಂ.. ಅಲ್ಲಾಹ್ ದುವಾ ಕರೇಗಾ.. ಮೇರೆ ಬಾಪ್.. ಅಂತ ಕೂಗ್ತಾ ಇರಬೇಕು.. ಅವಾಗ ಯಾರಾದ್ರೂ ಕಾಸು ಕೊಡ್ತಾರೆ ಅಂತ ಹೇಳಿದ್ರು. ಹಂಗೇ ಮಾಡಿದೆ.. ಸ್ವಲ್ಪ ಚಿಲ್ರೆ ಕಾಸು ಬೀಳ್ತಾ ಇತ್ತು.. ಅದ್ರಲ್ಲಿ ಊಟ ತಿಂಡಿಗೆ ಅಂತ ಖರ್ಚು ಮಾಡಿದ್ರೆ ಕಡೇಗೆ ನನಗೆ ಅಂತ ಏನೂ ಉಳೀತಾ ಇರಲಿಲ್ಲ.. ಅವಾಗ ಅಗೋ... ಅಲ್ಲಿ ಸರ್ಕಲ್‌ನಲ್ಲಿ ಭಿಕ್ಷೆ ಬೇಡ್ತಿದಾಳಲ್ಲ.. ನಸೀಮಾ ಅಂತ.. ಅವಳು ಊಟಕ್ಕೆ ಹೋಟ್ಲುಗೆ ಹೋಗಬೇಡ.. ಮಸೀದಿಯವರು ಸಂಜೆ ಮತ್ತೆ ರಾತ್ರಿ ಇಲ್ಲದೋರಿಗೆ ಊಟ ಕೊಡ್ತಾರೆ.. ನಾನು ಹೇಳ್ತೀನಿ.. ಬೆಳಿಗ್ಗೆ ಹೊತ್ತು ಮಾತ್ರ ಹೋಟ್ಲಲ್ಲಿ ತಿಂಡಿ ತಿಂದ್ಕೋ ಅಂತ ಹೇಳಿದ್ಲು.. ಅವಾಗಿಂದ ಮಸೀದಿಯೋರು ಮಧ್ಯಾನ್ಹ ಊಟ ಕೊಡ್ತಾರೆ.. ಭಿಕ್ಷೆ ಬೇಡಿದ ದುಡ್ಡಲ್ಲಿ ಎಲ್ಲ ಸೇರಿಸ್ಕೊಂಡು ತಿಂಗಳಿಗೊಂದು ಸಾರಿ ಹಣ್ಣು ವ್ಯಾಪಾರಕ್ಕೆ ಬಡ್ಡಿಸಾಲ ಮಾಡಿದ್ನಲ್ಲ.. ಅದರ ಬಡ್ಡಿ ಕಟ್ತಾ ಇದೀನಿ. ಜೊತೇಗೆ ಸ್ವಲ್ಪ ದುಡ್ಡು ಕೂಡಿಟ್ಟಿದೀನಿ.. ಎಲ್ಲ ಸೇರಿಸಿ ಒಂದ್ಸಲ ಆ ಸಾಲದ ದುಡ್ಡು ೪ ಸಾವಿರ ರೂಪಾಯಿನ ತೀರಿಸಿಬಿಟ್ರೆ ಆಮೇಲೆ ನಾನು ಸತ್ತೋಗಿಬಿಟ್ರೂ ಚಿಂತೆ ಇಲ್ಲ. ಇನ್ನೊಬ್ಬರ ಋಣ ಹೊತ್ಕೊಂಡು ಸತ್ತೋಗಿಬಿಟ್ರೆ ದೇವರು ನಮ್ಮನ್ನ ಸುಮ್ಮನೆ ಬಿಡಲ್ಲ.. ನೆಮ್ಮದಿ ಇರಲ್ಲ.. ಏನೋ ಭಿಕ್ಷೆ ಬೇಡ್ತೀನಿ.. ಸಿಕ್ಕಿದ್ದು ತಿಂತೀನಿ.. ದೇವ್ರು ಬಿಟ್ರೆ ನನಗೆ ಇನ್ಯಾರೂ ದಾರಿ ಇಲ್ಲ..

ಮೊದಲಿನಂಗೆ ನಂಗೆ ಇವಾಗ ನಡೆಯೋಕೆ ಆಗಲ್ಲ.. ಕಾಲುಗಳು ಊದಿಕೊಂಡಿದಾವೆ.. ರಾತ್ರಿ ಹೊತ್ತು ಇಲ್ಲೇ ಸೇತುವೆ ಕೆಳಗೆ ಮಲಕ್ಕೋತೀನಿ.. ಬೆಳಿಗ್ಗೆ ಎದ್ದು ಯಾರಾದ್ರೂ ಮಸೀದಿ ಪಕ್ಕ ಕರ‍್ಕೊಂಡು ಹೋಗಿ ಕೂರಿಸ್ತಾರೆ.. ಒಂದೊಂದ್ಸಲ ಯಾರೂ ಇಲ್ಲದಾಗ ನಾನೇ ತೆವಳಿಕೊಂಡು ಅಲ್ಲಿಗೆ ಹೋಗ್ತೀನಿ, ರಾತ್ರೆ ತನಕ ಅಲ್ಲೇ ಭಿಕ್ಷೆ ಬೇಡ್ತಾ ಇರ‍್ತೀನಿ.. ಈಗ ಎರಡ್ಮೂರು ತಿಂಗಳ ಹಿಂದೆ ನನ್ ನಾಲಿಗೆ ಈಚೆಗೆ ಬಿದ್ದು ಜೋತಾಡ್ತಾ ಇತ್ತು.. ಅದೇನು ಖಾಯಿಲೇನೋ ಏನೋ.. ಇಲ್ಲೇ ಒಬ್ರು ಡಾಕ್ಟ್ರು ಹತ್ರ ಇಗೋ ಈ ಕಸ ತಳ್ಳೋ ಗಾಡೀ ಇದೆಯಲ್ಲ.. ಅದ್ರಲ್ಲಿ ನನ್ನ ಹಾಕ್ಕೊಂಡು ಇಲ್ಲಿರೋರೆಲ್ಲ ಕರ‍್ಕೊಂಡೋಗಿದ್ರು.. ಡಾಕ್ಟ್ರು ಅದೆನೋ ಔಷಧಿ ಕುಡಿಸಿ ನಾಲಿಗೇನ ಒಳಗೆ ತಳ್ಳಿದ್ರು.. ಒಂದಷ್ಟು ದಿನ ಮಾತಾಡಬೇಡ.. ಬರೀ ನೀರಿನ ಪದಾರ್ಥ ಕುಡಿ ಅಂತ ಹೇಳಿದ್ರು.. ಹಂಗೇ ಮಾಡಿದೆ.. ಆಮೇಲೆ ಸ್ವಲ್ಪ ಸರೋಯ್ತು.. ಮಾತಾಡಬೇಕಾದ್ರೆ ಇವಾಗ್ಲೂ ನಾಲಿಗೆ ನೋಯ್ತಾ ಇರುತ್ತೆ. ಒಂದ್ಕಡೆ ಕಾಲು ಊದಿಕೊಂಡಿದೆ.. ಇನ್ನೊಂದು ಕಡೆ ನಾಲಿಗೆ ನೋಯ್ತದೆ.. ಇಲ್ಲೇ ಒದ್ದಾಡ್ತಿನಿ.. ಈ ಪೊಲೀಸ್ನೋರು ನನ್ ಪರಿಸ್ಥಿತಿ ನೋಡಿ.. ಯಾಕಮ್ಮ ಹಿಂಗೆ ನರಳ್ತಾ ಇರ‍್ತೀಯ ಯಾರಿಗಾದ್ರೂ ಹೇಳು ಮನೆ-ಗಿನೆ ಮಾಡಿಸಿಕೊಡ್ತಾರೆ.. ಕಾರ್ಪೊರೇಷನ್‌ಗೆ ಹೋಗಿ ಕೇಳು ಅಂತಾರೆ.. ನಡೆಯೋಕೆ ಆಗಲ್ಲ ಆಪೀಸ್‌ಗೆ ಹೆಂಗೆ ಹೋಗಲಿ.. ಯಾರನ್ನ ಕೇಳಲಿ? ನಂಗೆ ಊಟ ಬೇಡ ಏನೂ ಬೇಡ.. ಭಿಕ್ಷೆ ಬೇಡಿಕೊಂಡು ತಿಂತೀನಿ.. ನನ್ ಕಾಲೊಂದು ನೆಗವಾಗಿದ್ರೆ ಖಂಡಿತವಾಗಲೂ ನಾನು ಭಿಕ್ಷೆ ಬೇಡ್ತ ಇರಲಿಲ್ಲ ಕಣಪ್ಪ.. ನಮ್ಮೆಜಮಾನ ಬದುಕಿದ್ದಾಗ ನೆಂಟ್ರು ಇಷ್ಟರು ಮನೇಗೆ ಪಿತಪಿತ ಅನ್ನೋರು, ಇದೇ ಕೈಯೆತ್ತಿ ನೂರು ಜನಕ್ಕೆ ಹಾಕಿದ್ದೀನಿ, ಹತ್ತು ಜನಕ್ಕೆ ಮದುವೆ ಮಾಡಿಸಿದ್ದೀನಿ.. ನಂಗಿಂಥಾ ನಸೀಬ್ ಕೊಟ್ಬುಟ್ಯಲ್ಲ ಅಂತ ದೇವುರ‍್ನ ಬೈಕಂತೀನಿ, ಇಲ್ಲಾಂದ್ರೆ ಗಾಡಿ ಎಳಕೊಂಡಾದ್ರೂ ನನ್ನ ಅನ್ನ ವಂಚಿಕೊಂಡು ಇರ‍್ತಿದ್ದೆ.. ಆಯ್ಕಂಡ್ ತಿನ್ನೋ ಕೋಳಿ ಕಾಲು ಮುರಿದುಬಿಟ್ಟ ದೇವರು.. ಹಾಳಾಗೋಗ್ತನೆ ಅವನು.. ಬೇರೆ ದಾರಿ ಇಲ್ಲದಂಗೆ ಭಿಕ್ಷೆ ಮಾಡ್ತಾ ಇದೀನಿ. ಒಂದು ಮನೆ ಅಂತ ಆದ್ರೆ ಒಂದು ನೆರಳಿರುತ್ತೆ.. ಭಿಕ್ಷೆ ಬೇಡಿ ಹೋಗಿ ಮಲಗಿಕೋಬಹುದು.. ಮಳೆ ಬಂದ್ರೆ ಕಷ್ಟ.. ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ತೆವಳಿಕೊಂಡು ಹೋಗಬೇಕು.. ಬಟ್ಟೇ ಎಲ್ಲ ಸವೆದು ಹೋಗ್ತವೆ.. ಕುಂಡೀ ಹತ್ರ ಬಟ್ಟೆ ಎಲ್ಲ ಹರುದು ಹೋಗ್ತವೆ.. 

ಭಿಕ್ಷೆ ಬೇಡಿದ ದುಡ್ಡಲ್ಲಿ ಅಷ್ಟು ಇಷ್ಟು ಹಣ ಉಳಿಯುತ್ತಲ್ಲ ಅದ್ರಲ್ಲಿ, ಇಲ್ಲಿದಾಳಲ್ಲ ಅವಳ ಕೈಲಿ ಹೂವಿನ ಮಾರ್ಕೆಟ್ಟಿಂದ ಅರ್ಧ ಕೆಜಿ ಬಿಡಿ ಹೂವ ತರಿಸ್ಕೋತೀನಿ.. ಅದನ್ನ ಕಟ್ಟಿ ಒಂದು ಮೊಳಕ್ಕೆ ೧೦ ರೂಪಾಯಿ ಹಂಗೆ ಮಾರ‍್ತೀನಿ.. ಅ ದುಡ್ಡನ್ನ ಸಾಲ ತೀರಿಸೋಕೆ ಅಂತ ಎತ್ತಿಟ್ಕೋತೀನಿ. ಇವಾಗ ೨-೩ ತಿಂಗಳ ಹಿಂದೆ ಬಾಬರಿ ಮಸೀದಿ ಗಲಾಟಿದು ಕೋರ್ಟ್ ಆಯ್ತಲ್ಲ.. ಅವಾಗ ಪೊಲೀಸ್ನೋರು.. ಇಲ್ಲೆಲ್ಲ ಇರಬೇಡ ಕಣಮ್ಮ.. ಇಂದೂ ಮುಸ್ಲಿಂ ಗಲಾಟೆಗಳಾಗ್ತವೆ.. ನಿಂಗೇನಾದ್ರೂ ಏಟು ಬೀಳ್ತವೆ ಒಂದೆರಡು ದಿನ ಎಲ್ಲಾದ್ರೂ ಹೋಗು ಅಂತಂದ್ರು.. ನಾನು ಇಲ್ಲೇ ಪಕ್ಕದಲ್ಲಿ ಮುರುಗಮಲ್ಲ ದೇವಸ್ಥಾನ ಅಂತ ಐತಲ್ಲ ಅಲ್ಲಿ ಬುರ್ಖಾ ಬದಲು ಸೀರೆ ಉಟ್ಟಿಕೊಂಡು ಒಂದೈದು ದಿನ ಇದ್ದೆ.. ಕೋರ್ಟು ಗಲಾಟೆ ಎಲ್ಲ ಮುಗಿದ ಮೇಲೆ ಮತ್ತೆ ಇಲ್ಲಿಗೇ ವಾಪಸ್ ಬಂದೆ. ದೇವಸ್ಥಾನದಲ್ಲಿ ಪೂಜಾರಪ್ಪನೋರು ಯಾರಮ್ಮ ನೀನು ಯಾವ ಪೈಕಿ ಅಂತ ಎಲ್ಲ ಕೇಳಿದ್ರು.. ನಾನು ನನ್ನ ಹೆಸ್ರು ಸರೋಜಮ್ಮ.. ಅಂತ ಸ್ವಾಮಿ.. ನಂಗೆ ಯಾರೂ ಇಲ್ಲ ಎರಡು ದಿನ ಒಂದು ಮೂಲೇಲಿ ಇರ‍್ತೀನಿ ಅಂತ ಹೇಳಿ ಅಲ್ಲಿದ್ದೆ.. ನಾವು ಸಾಬ್ರು ಅಂತ ಹೇಳಿದ್ರೆ ಅವ್ರು ಒಳೀಕೆ ಸೇರಿಸ್ಕೊಳ್ಳಲ್ಲ.. ಪೂಜಾರಿಕೆ ಮಾಡೋರು ಬಾಡು ತಿನ್ನೋ ಸಾಬುರನ್ನ ಮನೇಗೇ ಸೇರಿಸಲ್ಲ.. ಅಂತಾದ್ರಾಗೆ ದೇವಸ್ತಾನದ ಒಳಗೆ ಬಿಡ್ತಾರಾ? ಅದ್ಕೇ ನಾನು ಸುಳ್ಳು ಹೇಳ್ದೆ. ನನ್ನದು ಅಂತ ಒಂದು ಮನೆ ಇದ್ರೆ.. ನಾನು ಅಲ್ಲಿಗೇ ಹೋಗಿ ಇರ‍್ತಿದ್ದೆ..

ಪಿಂಚಣಿ ಮಾಡಿಸಿಕೊಡ್ತೀನಿ ಅಂತ ತುಂಬಾ ಜನ ಬಂದು ಕಾಸು ಈಸ್ಕೊಂಡು ಹೋದ್ರು.. ಅವರಿಗೆ ಕೊಡಬೇಕು.. ಇವರಿಗೆ ಕೊಡಬೇಕು ಅಂತ ದುಡ್ಡು ಕೇಳೋರು.. ಬಡ್ಡಿ ಕೊಡೋ ಕಾಸಲ್ಲಿ ಅವರಿಗೆ ಕಾಸು ಕೊಟ್ಟೆ ಯಾರೂ ಏನೂ ಮಾಡಿಸ್ಲಿಲ್ಲ.. ಪಿಂಚಣಿನಾದ್ರೂ ಬಂದ್ರೆ ಆ ದುಡ್ಡನಾದ್ರೂ ಒಟ್ಟಿಗೆ ಸೇರಿಸ್ಕೊಂಡು ಸಾಲ ತೀರಿಸಬಹುದು.. ಅವ್ರೂ ನಂಗೆ ಮೋಸ ಮಾಡ್ಬಿಟ್ರು.. ಬಡುವ್ರ ಕಡೆ ಯಾರೂ ನೋಡೋದಿಲ್ಲ.. ಸಾವುಕಾರರನ್ನೇ ನೋಡ್ತ ಇರ‍್ತಾರೆ.. ನಮ್ಮನ್ನ ಕೇಳೋರು ಯಾರೂ ಇಲ್ಲ.. ಕಾಯಿಲೆ ಬಂದ್ರೆ ಮಾತ್ರೆ ತಗೋಬೇಕು.. ಈ ಕಾಲು ಊತಕ್ಕೆ ಈ ಮಾತ್ರೆ, ನಾಲಿಗೆ ಬೀಳ್ತದಲ್ಲ ಅದುಕ್ಕೆ ಈ ಮಾತ್ರೆ ಬರೆದುಕೊಟ್ಟವ್ರೆ.. ೨ ಮಾತ್ರೆಗೆ ೫೦ ರೂಪಾಯಿ ಕೊಡಬೇಕು.. ಈಟೀಟು ದಪ್ಪ ಸೇತುವೆ ಕಟ್ಟುಸವ್ರಲ್ಲ.. ಬಡುವ್ರಿಗೆ ಅಂತ ಮಾತ್ರೆ ಔಸ್ದ ರೇಟಾದ್ರೂ ಕಡಿಮೆ ಮಾಡಬಹುದಲ್ಲವಾ? ೫೦ ರೂಪಾಯಿ ಅಂದ್ರೆ ೫೦ ರೂಪಾಯಿ.. ಕಡಿಮೆ ಮಾಡ್ಕಳಪ್ಪ ದಿಕ್ಕಿಲ್ಲದೋಳು ಅಂತಂದ್ರೆ.. ಕಡಿಮೆ ಮಾಡ್ಕಳದಿಲ್ಲ.. ೫೦ ರೂಪಾಯಿ ನಮಗೆ ಒಂದು ದಿನದ ಭಿಕ್ಷೆ ಕಾಸು. ಅದನ್ನ ಕೊಟ್ಟು ಮಾತ್ರೆ ತಗೋಬೇಕು.. ವಾರಕ್ಕೆ ಎರಡು ಮೂರು ಸಲ ಮಾತ್ರೆ ತಿನ್ನಬೇಕಂತೆ.. ಮಾತ್ರೆ ದುಡ್ಡಿಗೆ ಭಿಕ್ಷೆ ಬೇಡಬೇಕು, ಭಿಕ್ಷೆ ಬೇಡೋಕೆ ಉಸಿರು ಬೇಕಲ್ಲ ಅದಕ್ಕೆ.. ಮಾತ್ರೆ ತಿನ್ನಬೇಕು..

ಭಿಕ್ಷೆ ಬೇಡೋಕೂ ಬಿಡಲ್ಲ.. ಒಂದ್ಸಲ ಏನಾಯ್ತು ಅಂದ್ರೆ ಇಲ್ಲಿ ಭಿಕ್ಷೆ ಬೇಡ್ತಾ ಇದ್ದೆ.. ಬೆಗ್ಗರ್ ಕಾಲೋನಿನೋರು ವ್ಯಾನ್ ತಗೊಂಡು ಬಂದು ನನ್ನನ್ನೂ ವ್ಯಾನಿಗೆ ಎತ್ತಿ ಹಾಕಿ ಬಿಟ್ಟಿದ್ರು.. ಬಿಡ್ರಪ್ಪ ಬಿಡ್ರಪ್ಪ ಅಂತ ಕಾಲು ಹಿಡ್ಕೊಂಡರೂ ಕೇಳಲಿಲ್ಲ.. ಕಡೆಗೆ ಇವ್ರು ನನ್ನ ಬಿಡಲ್ಲ ಕರ‍್ಕೊಂಡೋಗಿ ಕೂಡಾಕ್ತಾರೆ ಅಂತ ಅವರಲ್ಲಿ ಒಬ್ಬನ ಕೈ ಕಚ್ಚಿಬಿಟ್ಟೆ.. ಕೂಗಾಡಿದೆ.. ಅಷ್ಟೊತ್ತಿಗೆ ಮಸೀದಿನವ್ರು ಬಂದು ಈ ಯಮ್ಮ ಭಿಕ್ಷೆ ಬೇಡ್ತಿಲ್ಲ.. ಮಸೀದಿ ಕೆಲಸ ಮಾಡುತ್ತೆ ಅವರನ್ನ ಬಿಡ್ರಿ ಅಂತ ಹೇಳಿ ಗಲಾಟೆ ಮಾಡಿದ ಮೇಲೆ ಅದನ್ನ ಬರೆದುಕೊಡ್ರಿ.. ಅಂದ್ರು.. ಮಸೀದಿಯೋರು ಈ ಯಮ್ಮ ಮಸೀದಿಲಿ ಕೆಲಸ ಮಾಡ್ತಿದಾಳೆ ಭಿಕ್ಷುಕಿ ಅಲ್ಲ ಅಂತ ಬರೆದುಕೊಟ್ಟ ಮೇಲೆ.. ನನ್ನೊಬ್ಬಳನ್ನ ಬಿಟ್ಟು ಬಿಟ್ರು.. ಮಿಕ್ಕಿದೋರನ್ನ ಎಳ್ಕೊಂಡು ಹೋದ್ರು.. ಹಿಂಗೇ ಭಿಕ್ಷೆ ಬೆಡ್ಕೊಂಡು ಇದೀನಿ.. ಯಾವತ್ತೋ ಒಂದಿನ ಸತ್ತೋಗ್ತೀನಿ.. ಅವತ್ತು ಬೇವರ್ಸಿ ಹೆಣ ಅಂತ ಯಾರೋ ಮುನ್ಸಿಪಾಲ್ಟಿನೋರು ಮಣ್ಣು ಮಾಡ್ತಾರೆ.. ಅದನ್ನ ನೆನಸಿಕೊಂಡ್ರೆ ಕಣ್ಣಲ್ಲಿ ನೀರು ಬರುತ್ತೆ.. ನನ್ನ ಮಕ್ಕಳು ಎಲ್ಲೆಲಿದಾರೋ ಏನೋ.. ಅವರೇ ನನ್ನ ಮಣ್ಣು ಮಾಡಿದ್ರೆ..... ಅಷ್ಟೇ ಸಾಕು ನಂಗೆ. 

Wednesday 7 March 2012

ರನ್ನ ಹುಟ್ಟಿದೂರಿನ ದೇವದಾಸಿ ಸಂತೆವ್ವ ತೆಳಗೇರಿ ಮಾತುಗಳು

(ಹಿಂದೆ ಕೆಂಡಸಂಪಿಗೆಯಲ್ಲಿ ನನ್ನ ರಸ್ತೆ ನಕ್ಷತ್ರ ಕಾಲಂ ನಲ್ಲಿ ಪ್ರಕಟವಾದ ಲೇಖನವನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಪ್ರಸ್ತುತವೆಂದು ತಿಳಿದು ಇಲ್ಲಿ ಪ್ರಕಟಿಸುತಿದ್ದೇನೆ.)

"ಒಬ್ಬ ದ್ಯಾವರೂ ಹುಟ್ಟಿಲ್ಲವಾ ಭೂಮ್ತಾಯ ಹೊಟ್ಯಾಗ?' ದೇವದಾಸಿ ಸಂತೆವ್ವ ತೆಳಗೇರಿಮಾತುಗಳು."
ಆಗ ಕೂಲಿಗ ಭಾಳ ತ್ರಾಸ ಇತ್ತು ನೋಡ್ರಿ.. ನಮ್ಮಪ್ಪನು ಚಪ್ಪಲಿ ಹೊಲೆಯೋ ಕೆಲಸಾ ಮಾಡಾಂವಾ.. ನಾವು ಒಟ್ಟಾ ಎಂಟ ಮಂದಿ ಮಕ್ಕಳು ನಮ್ ಮನಿಯಾಗ, ನಾನೇ ಹಿರಿಯಾಕಿ.. ಆಗಿನ ಕಾಲಕ್ಕ ನಮ್ಮಪ್ಪನು ೭೫ ಪೈಸಾವು ಖರ್ಚು ಮಾಡಿ ಒಂದು ಚಪ್ಪಲಿ ಹೊಲೀತಿದ್ದನ್ರೀ.. ಅದನ್ನ ಒಂದ್ರೂಪಾಯಿ ಇಪ್ಪತ್ತೈದ್ ಪೈಸಕ್ಕ ಮಾರಾಂವ. ಹಿಂಗ ಚಪ್ಪಲಿ ಹೊಲದು ಇತ್ತಾ ಶಿರೋಳ, ಮುಗಳಖೇಡ ಈ ಕಡೀಕೆಲ್ಲ ಓಡಾಡಿಕೆಂತ ಮಾರಿಕಂಡು ಬರಾಂವ. ಬಂದ ರೊಕ್ಕದಾಗ ಜ್ವಾಳಾ ತರಾಂವಾ.. ಅದ್ನ ಬೀಸುಕಲ್ಲಾಗ ಬೀಸಿ ನುಚ್ಚು ಮಾಡಿಕೇಸಿ ತಪಲೀನಾಗ ಇಟ್ಟು ಕುದಿಸಿ ಉಣ್ಣುತಿದ್ವಿ. ನಮ್ಮಪ್ಪನ ಹೆಸರು ಕಾಶಪ್ಪ ಕಲ್ಮಡಿ ಅಂತೇಳಿ, ಅವ್ವನ ಹೆಸರು ನೀಲವ್ವ ಅಂತರೀ. ಮೊದಲು ಕುಳಲಿ ಅಂತ ಒಂದೂರಿತ್ರೀ.. ಅದ ಬಿಟ್ಟು ನಾ ವಯಸ್ಸಿಗೆ ಬರೋಷ್ಟೊತ್ತಿಗೆ ಮುಧೋಳದಿಂದ ೧೪ ಕಿಲೋಮೀಟ್ರು ದೂರದಾಗ ಇರೋ ರನ್ನ ಬೆಳಗಲಿ ಅನ್ನೋ ಕಡೀಕೆ ಬಂದುವು. ಈ ಊರಾಗ ರಾಜರ ಕಾಲದಿಂದಲೂವೆ ಅದ್ಯಾರೋ ರನ್ನ ಅಂಬೋರು ಮೊದಲೀಗೆ ಪದ್ಯಾವು ಬರೆಯೋರು ಇದ್ರಂತೆ.. ಕವಿ ಚಕ್ರುವರ್ತಿ ಅನ್ನೋರಂತೆ.. ನಂಗೇನೂ ತಿಳೀವಲ್ಲದು ಅವರ ಬಗ್ಗೆ.. ಯಾರ‍್ಯಾರೋ ದೊಡ್ಡ ಮನುಸರು ಪೋಟಾ ತೆಗೆಯೋ ಡಬ್ಬಾ ಹಿಡಕಂಡು ಬಂದು ಹೋಗ್ತಾರ.. ಅವರಿವರ ಬಾಯಲ್ಲಿ ನಾ ಕೇಳಿಸಿಕೊಂಡಿದ್ದು ಇದು.

ನಮ್ ಕಡೀಗ ನಮ್ ಕುಲದ ಹೆಣ್ ಮಕ್ಕಳು ಇರ‍್ತಾವಲ್ರೀ ಅವರನ್ನ ಮುತ್ತು ಕಟ್ಟಿ ಸೂಳಿ ಬಿಡಾದು ಹಳ್ಳ್ಳಳೀಗೂ ಐತ್ರೀ.. ನಾವೇನ್ ಮಾಡನರೀ, ನಮಗಿಷ್ಟ ಇಲ್ಲದಿದ್ರೂವೆ ಊರಾಗ ಬಾಳುವಿ ಮಾಡಬೇಕಲ್ಲರಿ.. ನಮ್ ಕುಲದಾಗಿನ ಚಂದಾನ ಹೆಣಮಕ್ಕಳನ್ನ ಬಸವಿ ಬಿಟ್ಟೂ, ಸೂಳಿ ಬಿಟ್ಟು ಕುಲಸ್ಥರ ಮನೆಯಾವರು ಅವರ ಹೆಣ್ ಮಕ್ಕಳನ್ನ ಮಾತ್ರ ಮದುವಿ ಮಾಡಿ ಕಳಸತಾರ್ರೀ.. ನಾವು ಮದೂವಿ ಆಗೋ ಹಂಗಿಲ್ಲ, ಗಂಡ ಸಂಸಾರ ಅಂತ ಇರಾ ಹಂಗಿಲ್ಲ, ನನ್ನ ಮಕ್ಕಳ ಬಾಳೇವೂ ಹಿಂಗಾ ಆಗೋದು ಬ್ಯಾಡಂತ ನಮ್ಮನ್ನ ಅಂಗೆ ಹೆಂಗೋ ಜ್ವಾಪಾನ ಮಾಡದರ್ರೀ ನಮ್ ಅಪ್ಪಾವ್ರು.. ಬಸವಿ ಬಿಡತಾರ ಅಂತ ಇದ್ದೂರು ಬಿಟ್ಟಗೇಸಿ ರನ್ನ ಬೆಳಗಲೀಗ ಕರಕೊಂಡು ಬಂದಾನ್ರೀ ನಮ್ಮಪ್ಪನು. ಹಂಗಾರಾ ನನ್ನ ಬಚಾವು ಮಾಡಾಕಾ ಆಗನೇ ಇಲ್ಲರೀ ನಮ್ಮಪ್ಪಗ.


ನಮ್ಮೂರ ಹಣಮಂತರದೇವ್ರ ಓಕಳಿ ನಡೀತಿತ್ತರಿ ಅವಾಗ, ೫ ದಿನ ನಡಿತಿತ್ರೀ.. ಆಗ ಭಾಳ ಚಂದ ಇದ್ದನಲ್ರೀ ನಾನೂ.. ಮ್ಯಾಗಿನ ಕುಲಸ್ಥರು ಓಕಳಿ ಆಡಾಕ ಮಗಳ ಕಳಸಲೇ ಕಲ್ಮಡೀ ಅಂತ ಹೆದರಿಸ್ತಾ ಇದ್ದರ್ರಿ ನಮ್ಮಪ್ಪಗ. ನಾ ಒಲ್ಲೆ ಅಂದರ ಮನೇ ಮುಂದುಗಡೇನೇ ಕೆಟ್ಟ ಕೆಟ್ಟ ಬಾಸೇನಾಗ ಬೈಯಾವರು ರೀ. ಸೂಳೇರಾ.. ಓಕಳೀಗೆ ಬರಲಿಲ್ಲ ಅಂದ್ರೆ ಹೆಂಗೆ ಬಾಳೇವು ಮಾಡೀರಿ ನೋಡ್ತೀವಿ, ಅಂತೆಲ್ಲ ಬೈಯ್ಯೋವರು. ನಮ್ ಜಾತಿ ಮಂದೀ ಅವರ ಮನೆಗಳಾಗ ದನ ಹಸು ಮ್ಯಾಕೆ ಮೇಯಿಸೋಕ ಹೋಗ್ತಿದ್ದವರ್ರೀ. ಓಕಳೀಗೆ ಹೋಗಲಿಲ್ಲಂದ್ರೆ ಕೆಲಸ ತೆಗೆಯೋವರು, ಊರು ಬಿಟ್ಟು ಓಡಿಸೋವ್ರು, ಕುರೀ ಮ್ಯಾಕೆ ಕಡಿದಂಗೆ ಕಡುದು ಹಾಕ್ತಿದ್ದರ್ರೀ. ಬ್ಯಾರೆ ದಾರಿ ಇಲ್ಲದಾಂಗ ಹೋಗಲೇಬೇಕಿತ್ ನೋಡ್ರಿ. ಹಣಮಂತ ದ್ಯಾವ್ರ ಗುಡೀ ಮುಂದ ಒಂದು ಕೊಂಡ ಇರ‍್ತಿತ್ತ.. ಅದನ್ನ ನಮ್ಮ ಮಂದಿನಾ ಹೋಗಿ ತೊಳದು ಬಳದು ಕಿಲೀನು ಮಾಡಬೇಕ. ಹಲಗಿ ಬಾರಸೋ ಗಸ್ತಿಯವ್ರು ಅಂತ ಇರ‍್ತಾರ ಅವರು ನಮ್ ಕುಲದ ಹೆಣಮಕ್ಕಳನ್ನ ಮನಿ ಮನಿಗ ಬಂದು ಮೆರೋಣಿಗೆ ತಗಂಡು ಹಣಮಂತ ಗುಡೀತಾವಕೆ ಕರ‍್ಕೊಂಡು ಹೋಗೋವ್ರು. ನಾಕೂ ಕಡೆಯಾಗ ಬಾಳೇಗಿಡ ಕಟ್ಟಿರೋ ಬಣ್ಣದ ಕೊಂಡ ತುಂಬಿರೋ ಹೊಂಡದಾಗ ನಾವ ಹೆಣಮಕ್ಕಳು ನಿಂದರಬೇಕ್ರಿ, ಸುತ್ತಾನ ಸುತ್ತಾ ಮ್ಯಾಗಲ ಕುಲಸ್ಥರ ಗಂಡೂಸರು ಬಣ್ಣ ಎರಚೋವರು, ನಾವು ಎರಚಿಸಿಕೋತಾ ಹಾಂಗಾ ನಿಂದರಬೇಕಿತ್ರೀ. ನೀರಾಗ ನೆಂದು ನಮ್ಮ ಮೈ ಎಲ್ಲ ಹಂಗಂಗೇ ಕಾಣ್ತಿರ‍್ತದ.. ನೀವಾ ಲೆಕ್ಕಾ ಹಾಕ್ಕೋರೀ ನಮ್ ಪಾಡು ಏನಾಗಿರತೇತಿ ಅಂತ. ಓಡಿ ಹೋದ್ರೂ ಬಿಡಾಣಿಲ್ಲ, ಅಟ್ಟಿಸಿಕೋತಾ ಬಂದು ನೀರು ಗೊಜ್ಜತಾರ (ಎರಚುತ್ತಾರೆ) ಹಿಂಗ ಓಕಳಿ ಆಡಾಕಂತಲೇ ನಮ್ ಕೆಳ ಕುಲಸ್ಥರ ಮನೆಗಳಿಗ ಪಾಳಿ ಹಚ್ಚಿರತಾರ. ಓಕಳಿ ಮುಗಿದ ಮ್ಯಾಲ ಹಣಮಂತ ದ್ಯಾವರಿಗೆ ಪೂಜೆ ಮಾಡ್ತಾರು, ಉಪ್ಪ ಊದಿನಕಡ್ಡಿ ಹಚ್ಚಿ ಪೂಜಾರಿ ಕೈಗ ಕೊಡ್ತೀವ.. ನಾವು ಗುಡಿ ಕಟ್ಟೆ ಹತ್ತಾಂಗಿಲ್ಲ ನೋಡ್ರಿ. ಕೆಳಗಾ ನಿಂತು ಕೈ ಮುಗೀತೇವು. ಆಮ್ಯಾಲ ಮ್ಯಾಗಳ ಕುಲಸ್ಥರು ಅವರವ್ರಿಗೆ ಇಷ್ಟ ಆದ ಹೆಣಮಕ್ಕಳ ಕೂಟೆ ಕರಕೊಂಡು ಹೋಯ್ತಾರಾ. ಮುತ್ತು ಕಟ್ಟಿಸಿಕೊಂಡ ಮ್ಯಾಲ ಓಕಳಿ ಆಡಿದ ಮ್ಯಾಲ ಆಕಿ ಬಸವಿ ಆಗ್ತಾಳ. ಸಿಕ್ಕ ಸಿಕ್ಕೋರೆಲ್ಲ ಹರಕೊಂಡು ತಿನ್ನೋಕೆ ಬಾಳೆ ಎಲೀ ಆಗ್ತಾಳ.


ಈ ಬಸವೀ ಬಿಡೋದು ಅಂತ ಐತಲ್ರೀ.. ಯಾವ್ ಕಾನೂನು ಬರದ ಮಗನಾ ಬಂದು ನರಾ ಹರಕೊಂಡ್ರೂ ಸುತ ಇನ್ನೂ ನಿಂತಿಲ್ ನೋಡ್ರಿ. ಅವಾಗೇನಿತ್ತು.. ಇವಾಗ್ಲೂ ಹಂಗೇ ಅದ. ನಂದೂ ಇದೇ ಕಥಿ ಆತು ನೋಡ್ರಿ ಮತ್ತ. ಊರಾಗಿನ ಮ್ಯಾಗಳ ಕುಲಸ್ಥರೆಲ್ಲ ನನ್ನ ಹರಕೊಂಡು ತಿಂದ್ರೂ.. ದುಡ್ಡಿಲ್ಲ ಕಾಸಿಲ್ಲ.. ಪುಗಸಟ್ಟೆ ಮಾಲದೀನಲ್ರೀ.. ಹಂಗಾಗಿ ಕಂಡ ಕಂಡ ಹಡಬೇ ಮಗನೆಲ್ಲ ಎಳಕಂಡು ಹೋಗಾವನೆ ನನ್ನ. ಬದಲೀಗೆ ನುಚ್ಚೋ ಜ್ವಾಳವೋ.. ಅವರು ಕೊಟ್ಟಂದ್ರೆ ಉಂಟು ಇಲ್ಲಾಂದ್ರ ಇಲ್ಲ. ಬಸವೀ ಇದೀಯಲ್ಲಬೇ.. ನೀ ಇರಾದ ನಮ್ ತೀಟಿ ತೀರಿಸಾಕ ಅಂತ ನಗೋವರು. ಹೊಟ್ಟಿಗಿ ಹಿಟ್ಟು ಬೇಕಲ್ರೀ.. ಊರು ಬಿಟ್ಟು ಬಸ್ ಹತ್ತಗಂಡು ಬಸ್ ಸ್ಟಾಂಡುಗಳಾಗ ದಂಧಿ ಮಾಡಾಕ ಶುರು ಮಾಡಿದಿ. ಅದೂ ಒಂದೋಸು ದಿನ ನಡೀತು. ೫೦-೧೦೦ ಕಡೀಗೆ ಇಪ್ಪತ್ತು.. ಊರಿಗ ಹೊಳ್ಳಿ ಹೋಗಾಕ ಬಸ್ ಚಾರ್ಜಿಗಾರ ಆಗಲಿ ಅಂತ ಮೈ ಹಾಸಿಬಿಟ್ಟೇನ್ರೀ.. ಪೋಲೀಸುರು ತಿಂದ್ರು, ರವಡೀಗೂಳು ತಿಂದ್ರು.. ಅವರಿಗೆಲ್ಲ ತಿನೂಸಿ ಮಿಕ್ಕಿದ್ದು ನನಗೆ. ಕಡೀಗೆ ಇದ್ಯಾತರ ಬಾಳು ಅನಿಸಿಬಿಡಾದು. ಒಂದಿನಾ ಬಾಂಬೇದಾಗ ಧಂಧೆ ಮನೇಗೋಳು ಇರತಾವ, ಅಲ್ಲಾದರೂ ಹೋಗನ ನಡಿಯಬೇ, ಈ ಊರು ಬ್ಯಾಡ, ಈ ಜನಾ ಬ್ಯಾಡ, ಹರದೋಗಿ ಆಗೇತಿ ಎಲ್ಲಿ ಬಿದ್ದರೇನು ನಮಗ.. ಅಂತ ನನ್ ಕೂಟ ಇದ್ದ ಗೆಣತೀರು ಅಂದ್ರು. ಸರಿ ಅಂತೇಳಿ ಬಾಂಬೇದಾಗ ಒಂದು ದಂಧೇ ಮನೀ ಹೊಕ್ಕಂಡವಿ. ಭಿಂಢಿಚಾಳ್, ಪತ್ರಚಾಳ್ ಅನ್ನಾ ಕಡೇ ಆ ದಂಧೆ ಮನೀ ಇತ್ತು, ಹೋಗಿ ನೋಡಿದೆನ್ರೀ.. ಯಪ್ಪಾ.. ಇದೇನು ದೇಸವೋ ಹಣಮಂತನೇ ಅನ್ನಾ ಹಂಗಾಯ್ತು ನೋಡ್ರಿ.. ಮುಸಲರು, ಮರಾಠ್ರು, ಒಡ್ಡರು, ಕೊರಮರು, ಹಿಂಗೆ ಎಲ್ಲಾ ಜಾತೀ ಹೆಣಮಕ್ಕಳೂ ಅಲ್ಲೇ ಇದ್ದವರೀ. ಗರವಾಲಿ ಮನೆ ಅನ್ನತಾ ಇದ್ರು ಅದಕ್ಕ.. ಮನೀ ಒಳಗ ಬಂದ್ರ ಅಲ್ಲಿ ಒಂದೊಂದು ಖೋಲಿ (ಕೋಣೆ) ಇರತಿದ್ವು.. ನಮಗಾ ಒಂದೊಂದು ಖೋಲೀ. ಗಿರಾಕಿಗೋಳ ದುಡ್ಡಿನಾಗ ಗರವಾಲೀಗೆ ಒಂದು ಪಾಲು ನಮಗೊಂದು ಪಾಲು ಅನ್ನೋ ಥರ ಅದೂ.

ಗರವಾಲೀ ಮನ್ಯಾಗ ಎರಡು ಥರ ಸಂಪಾದನೆ ಇರತಿತ್ತು, ಒಂದು ಮೈ ಹಾಸೋದು, ಇನ್ನೋಂದ ಡಾನ್ಸು ಮಾಡಾದು, ನಾ ಚಾಲೂಕಿದ್ದನಲ್ರೀ.. ಯಾವ ಹಿಂದೀ ಸಿನುಮದ ಹಾಡು ಬಂದ್ರೂ ಕಲತುಬಿಡತಿದ್ದೆ.. ಜನಾ ನೋಟು ಎಸೆಯೋರು.. ಗರವಾಲೀ ಮನೆಯಾಘಿಂದ ವರುಸಕ್ಕ ಒಂಡೆಲ್ಡು ಸಲ ಊರೀಗೆ ಹೋಗಾಕ ಬೀಡೋವರು. ಹಂಗೇ ಒಂದ್ಸಲ ಊರಿಗೆ ಹೋಗೋವಾಗ ರೇಡಿಯೋವು ತಗೊಂಡು ಹೋದನ್ರೀ.. ಅಲ್ಲೀಮಟ ನಮ್ಮೂರಾಗ ರೇಡಿಯೋವು ಸುದ್ದೀನೇ ಇರಲಿಲ್ಲ ನೋಡ್ರಿ.. ಜನಾ ರೇಡಿಯೋ ಹಚ್ಚಿದರ.. ರೇಡಿಯೋ ಒಳಗೂ ಯಾರೋ ಜನಗೋಳು ಕುಂದರಿಕೊಂಡು ಪದಾ ಏಲ್ತಾರು ಅಂತ ನೋಡೋವ್ರು.. ಜನಾ ಹ್ಯಾಂಗ ಬರೋವ್ರು ಅಂದ್ರ ರೇಡಿಯೋ ನೋಡಾಕ ನಮ್ಮನೀ ಅಂಗಳಾನಾ ತುಂಬಿ ಹೋಕ್ಕಿತ್ತು. ನಮ್ಮ ರಬಕವೀ ಜನಕ್ಕ ರೇಡಿಯೋ ಅಂದ್ರ ಏನು ಅಂತ ಗೊತ್ತು ಮಾಡಿದ್ದು ನಾನಾ ನೋಡ್ರಿ.. ಹಿಂಗೇ ಒಂದ ಇಪ್ಪತ್ತ್ ವರ್ಷ ಹ್ವಾದವು. ನಂಗೂ ಈ ಮೈ ಮಾರೋ ದಂಧೀ ಬ್ಯಾಡ ಅನಸಾಕ ಹತ್ತತು. ದುಡಿದ ದುಡ್ಡನಾಗ ನನ್ನ ತಂಗೇರು ತಮ್ಮದೀರು ಮದುವಿ ಮಾಡಿ ಕೊಟ್ಟನಿ. ಯಾರಿಗೋ ಹ್ಯಂಗೋ ನಂಗೂ ಮಕ್ಕಳುಳಾದವು, ಅಪ್ಪೆಲ್ಲಬೇ ಅಂದ್ರ ತೋರಿಸಾಕ ಸುತ ನನಗ ಅವರ ಮಕಾ ನೆಪ್ಪೀಗೆ ಬರವಲ್ಲದು. ಹೆಂಗೋ ಸಾಕಿದೆ ಅವರಿಗೂ ಮದುವಿ ಆತು. ಇಬ್ಬರು ಮೊಮ್ಮಕ್ಕಳದಾರ.. ಇವು ಮೂರ್ ದಿನ ಸಾಲಿಗೋದರ ಮೂರು ದಿನ ಕೆಲಸಕ್ಕ ಹೋಕ್ತತಿ. ನಾವು ನಾಕು ಮಂದಿ ಹೆಣಮಕ್ಕಳಾಗ ಇಬ್ಬರನ್ನ ಮುತ್ತು ಕಟ್ಟಿ ಬಸವಿ ಬಿಟ್ಟಿದ್ರು.. ನನ ತಂಗೀ ರೇಣುಕಾ ಅಂತಾ.. ಆಕೀನಾ ಸೂಳಿ ಬಿಟ್ಟಾರ.. ಅವಳ ಮಗಳೂ ಈಗ ವಯಸ್ಸಿಗೆ ಬಂದ ಮ್ಯಾಲ ಸೂಳಿ ಬಿಟ್ಟಾರ.. ಕಮಲವ್ವ ಅಂತಿದ್ಲು ಆಕಿ ಸಣ್ಣಾಕೀನಾಗೇ ಸತ್ತು ಹ್ವಾದಳು.. ಸೂಳೀರ ಜಗತ್ತಾ ಇದು.. ಇದರಾಗೇ ನಾವು ಬೆಳದವಿ, ನಮ್ಮವ್ವ ಬೆಳದಳು, ನನ್ನ ಮಗಳು ಬೆಳದಳು, ಸಂಸಾರ ಕಟಕೊಳಾಕ ಮಾತ್ರ ಈ ಮ್ಯಾಗಣ ಕುಲಸ್ಥರು ಬಿಡವಲ್ಲರು. ಅವರ ಮನೀ ಹೆಣಮಕ್ಕಳು ಚಂದ ಚಂದನ ಗಂಡುಮಕ್ಕಳ ಕೂಟೆ ಸಂಸಾರ ಮಾಡಿಕೋತಾರಾ.. ನಮ್ಮನೀ ಹೆಣಮಕ್ಕಳಿಗೆ ಯಾಕೋ ಯಪ್ಪ ಇಂಥಾ ಬಾಳೇವು..? ಮೈಯಾಗ ಖಂಡ ಇರೋತನ ಚಲೋ, ಆಮ್ಯಾಲಿನ ನಮ್ಮ ಪಾಡು ನಾಯಿಬಾಳು ಆಗಿ ಕುಂತೇತಿ..


ನಮ್ಮ ಕಥೇವು ಬಿಡ್ರವಾ.. ಈಗಿನ ಹೆಣಮಕ್ಕಳ ಕಥೇವು ನೋಡ್ರಿ.. ಮುತ್ತು ಕಟ್ಟೋರನ ಜೈಲಿಗಾಕ್ಕೀವಿ ಅಂತಾರ ಸರ್ಕಾರದೋರು, ಯಾವೊಬ್ಬನೂ ನಮ್ಮ ಕಡೆ ತಿರುಗಿ ನೋಡೋವನು ಇಲ್ಲದಂಗ ಕಾಡುಬಾಳೇವು ಆಗೇತಿ ನಮದು. ಕಾನೂನು ಮಾತಾಡೋ ಹಡಬೇಮಕ್ಕಳು ಒಬ್ಬರಾದ್ರೂ ಈ ಹರಕುಬಾಳ ನೋಡಾರಾ? ಮುತ್ತು ಕಟ್ತೀವಿ, ದೇವದಾಸೀ ಮಾಡ್ತೀವಿ, ಬಸವಿ ಬಿಟ್ಟೇವಿ ದೇವರ ಕೂಸ ನೀ ಅಂದು ನಮ್ಮ ಹೆಣಮಕ್ಕಳನ ಹುರಿದು ಮುಕ್ಕಿ ತಿನ್ನಕ್ಕ ಹತ್ಯಾರ. ಹೆಣ ಮಗಾ ಆತು ಅಂದ್ರೆ ಪೇಟೆ ಕಡೆಯೋರು ಹೊಟ್ಟೆ ಕುಯ್ಯಿಸಿಕೋತಾರಂತ, ಇಲ್ಲಿ ಬಂದು ನೋಡ್ರಪಾ ನಮ್ಮ ಊರುಗಳಾಗೆ ಹೆಣಮಗಾ ಆತು ಅಂದ್ರೆ ಹಬ್ಬಾ ಮಾಡತಾ ಅದಾರು. ಹೆಣ್ಣಗೂಸ ಹುಟ್ಟಿದರ, ಅದು ಬಾಂಬೇಗ ಹೋಕ್ಕತೆ, ಅಲ್ಲಿ ಮೈ ಮಾರಿಕಂಡಾದ್ರೂ ನಮ್ಮನ್ನ ಸಾಕತೇತಿ ಅಂತ ಕುಸೀ ಪಡೋ ದರಬೇಸಿ ಪರಸ್ಥಿತಿ ಬಂದೇದ ನಮಗ. ಇಲ್ಲುಟ್ಟೋ ಯಾವ ಹೆಣಮಗಾನೂ ಇವತ್ತಿನ ಮಟಾ ಬಸವೀ ಆಗದಂಗೆ ಬಚಾವು ಮಾಡಾಕಾ ಒಬ್ಬ ದ್ಯಾವನೂ ಹುಟ್ಟಿಲ್ಲವಾ ಭೂಮ್ತಾಯ ಹೊಟ್ಯಾಗ? ಹೆಣಮಗಾ ಮೈ ನೆರೀತಂದ್ರ ಬಾಂಬೇ, ಪೂನಾ, ಸಾಂಗ್ಲೀನಾಗಿಂದ ಓಡಿ ಬತ್ತಾರ ಗರವಾಲಿಗೋಳು, ಊರಿಗೆಲ್ಲ ಊಟ ಹಾಕಸಿ ಬೆಲ್ಲ ಹಂಚಾಕ ಕಾಸು ಬೇಕಲ್ಲಪಾ.. ಗರವಾಲೀಗೋಳು ಕೊಡತಾರಾ ಹೆಣಮಕ್ಕಳ ಹೆತ್ತೋರಗ! ಸಿನುಮ ನೋಡಕೆ ತಿಕೇಟ ಮಾಡತರಲ್ಲ, ಹಂಗೇ ಊರಾಗಿನ ಮ್ಯಾಗಣ ಕುಲಸ್ಥರು ಮೈ ನರದ ಹೆಣಮಗಾನ ದವಡೀಗ ಹಾಕ್ಕೊಂಡು ಅಗದು ಬಿಸಾಕಿದ ಮ್ಯಾಲ ಗರವಾಲಿ ಕೊಟ್ಟ ಕಾಸು ತೀರಿಸಾಕ ಹಸೀ ಮೈಯ ಹೊತಗಂಡು ಬಾಂಬೇಗ ಹೋಗತದ ಹೆಣ್ಣಗೂಸ. ಅಲ್ಲೊಂದೆರಡು ವರ್ಷ ಕಂಡ ಕಂಡೋರ ಕೆಳಗ ಬಿದಕೊಂಡು, ನಾಕು ಕಾಸು ಕಂಡು, ಬತ್ತಾ ಚೈನು, ಬಳೀ, ಒಳ್ಳೇ ಬಟ್ಟೀಬರೀ ಹಾಕ್ಕಂಡು ಬತ್ತದ.. ಮೈ ನರೆಯೋ ಹೆಣ್ಣಕೂಸಗಳಾದ್ರೂ ಏನ ಮಾಡ್ತಾವ.. ಅಕ್ಕಾ ಬಂದಾಳ.. ಬಟ್ಟೀಬರೀ, ಚೈನು, ಬಳೀ ಎಲ್ಲ ತಂದಾಳ.. ನಾವೂ ಹೋಗಮಿ ಬಾಂಬೇಗ ಅನಸತದ ಅವುಕ್ಕ. ತಿನ್ನಾಕ ಒಂದು ಮುರುಕ ಜ್ವಾಳದ ರೊಟ್ಟೀನೂ ಇಲ್ಲವಲ್ಲ ಮನ್ಯಾಗ.. ರೊಟ್ಟಿ ಸಿಗತೈತಿ ಅಂತ ಬಾಂಬೇ ಬಸ್ ಹತ್ತುತಿದಾವಾ ನಮ್ಮ ಹೆಣಗೂಸುಗಳು..

ಬಾಂಬೇಗ ಹೋದಾವು ವರುಸಾನ ಕಾಲ ಇದ್ದು ಹೊಳ್ಳಿ ಬರೋವಾಗ ಮೈ ತುಂಬಾನ ಜಡ್ಡು ಹೊತಗಂಡು ಬರತಾವು.. ಬಂದ ಆರೇಳು ತಿಂಗಳಾ ಅಷ್ಟೆ. ಅದೆಂಥೆಂಥಾ ಜಡ್ಡು ಬರತಾವೋ ನಾ ಕಾಣಿ, ನರಳೀ ನರಳೀ ಸಾಯ್ತಾವೂ. ಯಾರ‍್ಯಾರಿಗೋ ಹುಟ್ಟಿದ ಕೂಸಗಳು, ಕೇಳಾಕ ದಿಕ್ಕೂ ದೆಸೀ ಇಲ್ಲದಂಗ ಬೀದಿಗೊಂದು ಪಾಲಾಗ್ಯಾವ. ಅವ್ವಿಲ್ಲ, ಅಪ್ಪಿಲ್ಲ, ಹೆಣಗೂಸಾದ್ರ ಇನ್ನ ಹತ್ತೊರಸ ಕಳದ ಮ್ಯಾಲ ಅದರ ಕಥೆಯೂ ಇಷ್ಟಾ.. ಗಂಡುಗೂಸಾದರ ಕಳತನವೋ, ಕೊಲೆಯೋ, ಮಾಡಬಾರದ್ದು ಮಾಡಕಂಡು ಅರ್ಧ ಹುಡೂಗರನ್ನ ಪೋಲೀಸರೇ ಹೊಡೆದಾಕಾತಾರ.. ಇನ್ನರ್ಧ ಊರು ಬಿಟ್ಟು ದೇಸಾಂತಾರ ಹೋಗ್ಯಾವ.. ಇದ್ನೆಲ್ಲ ನೋಡೀ ನೋಡೀ ನನ್ನ ಕಣ್ಣೂ ಇಮರೋಗಿ ಇವತ್ತಗೋ ನಾಳಗೋ ನನ್ನ ಗೋಣು ವಾಲಿಕೋತದ, ಹಳ್ಳಾ ಅಗದು ಮುಚ್ಚತಾರ. ಜನಮಾ ಅಂತ ಒಂದಿದ್ರ ಹೆಣ ಜನಮ ಬಿಟ್ಟ ಬ್ಯಾರೆ ಯಾವುದಾರ ಜನಮ ಕೊಡೋ ಹಣಮಂತನೇ ಅಂತ ನಾನೂ ಮಣ್ಣಾಗ ಮಕ್ಕೊಂಡೇನ.. ಇದಾ ನೋಡ್ರಿ ನಮ್ಮ ಕಥಿ.. ಕೇಳಕಂಡು, ಬರಕೊಂಡು ಏನ ಮಾಡೀರಿ.


ಕೆಂಡಸಂಪಿಗೆಯಲ್ಲಿ ಈ ಲೇಖನ ಓದಲೂ ಪ್ರತಿಕ್ರಿಯೆ ಗಮನಿಸಲೂ ಇಲ್ಲಿ ಕ್ಲಿಕ್ಕಿಸಿ





ವಿಶ್ವ ಮಹಿಳಾ ದಿನದ ಸಂದೇಶ
















______________________________________________________________________________________________________________________

ಭೂಮಿತೂಕದ ಸಹನೆಯ ಹೆಣ್ಣು ಗಂಡಿಗಿಂತಲೂ ಒಂದು ಕೈ ಮಿಗಿಲಾದ ತಾಕತ್ತುಳ್ಳ ಜೀವ, ಇರುವೆಯ ಕಣ್ಣಿನಷ್ಟು ಸೂಕ್ಷ್ಮದ ಮನಸ್ಸಿನ ಹೆಣ್ಣು ನಮ್ಮಂಥಹ ಗಂಡುಪ್ರಾಣಿಗಳಿಗೆ ಮೊಗೆಮೊಗೆದು ಪ್ರೀತಿ ಕೊಟ್ಟ ಜೀವ. ತೊಟ್ಟಿಲಲ್ಲಿ, ಕಿರುಬೆರಳಲ್ಲಿ, ಜಗತ್ತು ಅರ್ಥವಾದದ್ದೇ ಹೆಣ್ಣುಜೀವದ ಮೂಲಕ. ಬೆಟ್ಟವನ್ನೇ ಬಗೆದು ಎರಡು ಭಾಗ ಮಾಡಿ ರಸ್ತೆ ರೂಪಿಸಿದ ದಶರಥ ಮಾಂಝಿಯೊಳಗಿದ್ದುದೂ ಹೆಣ್ಣುಜೀವವೊಂದರ ಕಡುಪ್ರೀತಿ. ದಿನವೂ ನಮ್ಮನ್ನು ಸಹನೆಯಿಂದ, ಪ್ರೀತಿಯಿಂದ ಮಮತೆಯಿಂದ ಪೊರೆಯುವ ಹೆಣ್ಣುಜೀವಗಳು ಇನ್ನಷ್ಟು ತಂಪಾಗಿ ಬದುಕಲಿ. ಹೆಣ್ಣು ಯಾವತ್ತೂ ಗಂಡಿನ ಗುಲಾಮಳಲ್ಲ.. ಗಂಡಸರಾದ ನಮ್ಮ ದುರಹಂಕಾರಗಳು ಹೆಣ್ಣು ಜೀವದೆಡೆಗಿನ ನಮ್ಮ ದಬ್ಬಾಳಿಕೆಗಳು ಕಟು ಧೋರಣೆಗಳು ಇನ್ನಾದರೂ ಚೂರೂ ಉಳಿಯದೇ ಅಳಿದುಹೋಗಲಿ.


ಅಲ್ಲಿ ಸಾವೂ ಇತ್ತು.. ಸಾಸಿವೆಯೂ ಇತ್ತು..

ಇದ್ದ ಗಂಡನೊಬ್ಬನೂ ಸತ್ತು.. ಆ ಜೀವದಹಕ್ಕಿ ಹಸಿದು ಕುಳಿತಿದೆ..
ಬೋಡುಬೆತ್ತಲಾದ ನಗ್ನ ಮರವೊಂದರ ಹೊಕ್ಕಳಲ್ಲಿ,
ಇಲ್ಲದ ಗೂಡೋ, ಇರುವ ಪಂಜರವೋ.. ಎರಡೂ ತಿಳಿಯದ
ಮಾಗಿದ ಹಳದಿಯೆಲೆಗಳು ಸುಮ್ಮಗೆ ಭೂಮಿಗುದುರುತ್ತಿವೆ.

ಹುಟ್ಟಿದ್ದೋ, ಇಟ್ಟದ್ದೋ, ಕೊಟ್ಟಿದ್ದೋ.. ಹೆಸರು ಬೆಂಕಿಯಂತೆ..
ಸೊಂಟ ಸುಟ್ಟ ಮರದ ಚರ್ಮದ ಬಣ್ಣ ಕಪ್ಪಗೆ ಹಕಳೆ,
ಬಾಣಂತನದ ಸೊಗಸಿಗೆ ಮುಖತಿರುವಿದ ಕೊಂಬೆಯ ಕಾಜಾಣ ಅಂದುಕೊಳ್ಳುತ್ತದೆ..
ದೂರದ ಸೊಟ್ಟಪಟ್ಟ ಮರದೊಳಗೆ ಇಟ್ಟ ಮೊಟ್ಟೆಯೇನಾದವು?

ಬಿದ್ದ ಭತ್ತದ ಕಾಳೊಳಗೆ ಹಾಲಿನ್ನೂ ತುಳುಕುತ್ತಿದೆ..
ಪಕ್ಕದ ಬೇಣದ ಇರುವೆಗಳ ಕೊಟ್ಟೆಮನೆಯೊಳಗೆ
ಸತ್ತ ಪುಟ್ಟಿರುವೆಯ ಹಣೆಯ ಮೇಲೆ ತಿನ್ನಲಾಗದ ಸಾಸುವೆ..
ಅಲ್ಲಿ ಸಾವೂ ಇತ್ತು.. ಸಾಸಿವೆಯೂ ಇತ್ತು.. ಬುದ್ದನೇ ಇರಲಿಲ್ಲ.

ಕಣ್ಣಿಗೆ ಸಿಗದ ತಾಯಿಯೊಬ್ಬಳು ಧೂಳಿನ ಮೇಲೆ ಬರೆಯುತ್ತಾಳೆ
ಇದು ನನ್ನದಲ್ಲ.. ಬೇರೆಯವರದ್ದೂ ಅಲ್ಲ.. ನಿನ್ನದು ಮಾತ್ರವಾಗಿ
ರೆಕ್ಕೆಕೊಕ್ಕಿನ ಮೇಲೆ, ರಾಗಿಕಾಳಿನಂಥ ಎದೆಯ ಮೇಲೆ..
ನಾನು ಬರೆದದ್ದಷ್ಟೇ ನಿನ್ನದು. ಉಳಿದದ್ದು ಶೂನ್ಯಕ್ಕೆ..

ಯಾರೋ ಗಾಳಿಯ ನಂಚಿಕೊಂಡು ಬೆಳಕಿನ ಚೂರು ತಿನ್ನುತ್ತ,
ಕಣ್ಣಿರುವ ಪ್ರೀತಿಗೆ ಸುಟ್ಟಮರದ ಬುಡದಡಿ ತಡಕಾಡುತ್ತಿದ್ದಾರೆ..
ಎಲ್ಲಿಂದಲೋ ತೆವಳಿ ಇಲ್ಲೇ ಬದುಕುತ್ತಿದ್ದ ಕೇದಗೆಪೊದೆಯ ಹಾವೊಂದು
ಪೊರೆ ಕಳಚಿಕೊಳ್ಳಲು ಕತ್ತಲಿರುವ ತಾವೊಂದ ಹುಡುಕುತ್ತಿದೆ.
- ಟಿ.ಕೆ. ದಯಾನಂದ

Tuesday 6 March 2012

ದಿ ಆರ್ಟಿಸ್ಟ್: ಶಬುದಕ್ಕೆ ಬಸಿರಾದ ಮೌನದ ಬಗ್ಗೆ..



‘ಇವು ಆಸ್ಕರ್ ಹೊಡೀತವೆ ನೋಡು’ ಅಂತ ಗೆಳೆಯರೊಬ್ಬರು ಒಂದು ಗಾಡಿ ಆಂಗ್ಲ ಸಿನಿಮಾಗಳ ಪಟ್ಟಿ ಕೊಟ್ಟು ನೋಡಲು ಹೇಳಿದ್ದರು. ಹೌದೇನೋ ಯಾವುದಕ್ಕೂ ನೋಡೇ ಬಿಡೋಣ, ಆಸ್ಕರ್ ಬರೋಕ್ಕಿಂತ ಮೊದಲೇ ನಾನು ಇದನ್ನು ನೋಡಿದ್ದೆ ಅಂತ ಗೆಳೆಯರೆದೆರು ಮೀಸೆ ತಿರುವೋಕೆ ಆದರೂ ಇರಲಿ ಅಂತ ಒಂದರ ಹಿಂದೊಂದು ಆಸ್ಕರ್ ನಾಮಿನೇಟೆಡ್ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೆ. ನಾನು ನೋಡಿದ ಯಾವುದಕ್ಕೂ ನೆಟ್ಟಗೊಂದು ಪ್ರಶಸ್ತಿ ಬರಲಿಲ್ಲ.

ಆಸ್ಕರ್ ಘೋಷಣೆಯಾದ ನಂತರ ನನ್ನನ್ನು ಗೆಳೆಯ ದಿವೀನಾದ ಹಳ್ಳಕ್ಕೆ ಕೆಡವಿದ್ದು ಗೊತ್ತಾಯ್ತು. ಅವನು ಹೇಳದಿದ್ದ, ನಾನು ನೋಡದಿದ್ದ ‘ದಿ ಆರ್ಟಿಸ್ಟ್’ ಸಿನಿಮಾ ಆಸ್ಕರ್ ಕಣದ ಬಹುಮುಖ್ಯ ಪ್ರಶಸ್ತಿಗಳನ್ನು ಸೂರೆ ಹೊಡೆದಿತ್ತು. ಇತ್ತೀಚೆಗೆ ಅದನ್ನು ನೋಡಿದ ನಂತರ ಇದೇನು ಅಂತಹ ಆಹಾ ಓಹೋ ಸಿನಿಮಾವಲ್ಲ. ನಮ್ ಅಣ್ಣಾವ್ರ ಕಸ್ತೂರಿ ನಿವಾಸವನ್ನ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ತಿರುವಿ ಬಗ್ಗಿಸಿ ಹಾಲಿವುಡ್ನವರು ದಿ ಆರ್ಟಿಸ್ಟ್ ಮಾಡಿದ್ದಾರೆ ಅನ್ನಿಸಿತು. ಇದರ ಹೊರತಾಗಿಯೂ ಈ ಸಿನಿಮಾದ ಬಗ್ಗೆ ಹೇಳಬೇಕಿರುವುದು ಬೇರೆಯದ್ದೇ ಇದೆ.
ವಿನೈಲ್ ಪೋಸ್ಟರುಗಳು ಹೋರ್ಡಿಂಗ್ ಗಳು ನಗರಗಳೊಳಗೆ ಗಹಗಹಿಸುತ್ತ ಪ್ರವೇಶಿಸುವ ಮೊದಲು, ಬ್ಯಾನರ್ ಬರೆಯುವ, ಗೋಡೆಗಳ ಮೇಲೆ ಜಾಹಿರಾತುಗಳನ್ನು ಬರೆಯುತ್ತ ಬದುಕುತ್ತಿದ್ದ ಸಾವಿರಾರು ಚಿತ್ರಕಲಾವಿದರು ನಮಗೆಲ್ಲರಿಗೂ ನೆನಪಿದ್ದರು. ಒದ್ದೆಬಣ್ಣದಲ್ಲಿ ಬ್ರಶ್ಶು ಅದ್ದಿಕೊಂಡು ಸುನೀತವಾಗಿ ಬೆರಳು ತಿರುಗಿಸುತ್ತ ಅವರು ಅಕ್ಷರ ಬಿಡಿಸುವ ಪರಿಯೇ ಮಾಂತ್ರಿಕವಾಗಿತ್ತು. ಈಗ ಬ್ಯಾನರ್ರು ಬರೆಯುವ ಮಾಂತ್ರಿಕತೆಯನ್ನು ಬರೆಯುವ ಬೆರಳುಗಳ ಸಮೇತ ನೆನಪಿನ ಭೂಮಿಯೊಳಗೆ ಹೂತು ಹಾಕಿದ್ದೇವೆ, ಮಿಕ್ಸಿ ಗ್ರೈಂಡರುಗಳು ಬರುವ ಮೊದಲು ಒಬ್ಬಾತ ಹೆಗಲ ಮೇಲೆ ಗೋಣಿಚೀಲ ನೇತಾಕಿಕೊಂಡು ಕಲ್ಮುಳ್ ಹುಯ್ತೀವಪ್ಪ ಕಲ್ಮುಳ್ಳೂ ಅಂತ ಏರುದನಿಯಲ್ಲಿ ಊರೂರಲ್ಲಿ ಕೂಗಿಕೊಂಡು ಸುತ್ತಿಗೆ ಉಳಿ ಹಿಡಿದು ಅಲೆಯುತ್ತಿದ್ದವರೂ, ಎತ್ತುಗಳನ್ನು ಅರಳೀಮರದ ಕೆಳಗೆ ಮಲಗಿಸಿ ಅವುಗಳ ಕಾಲಿಗೆ ಲಾಳ ಹೊಡೆಯುತ್ತ ಬದುಕುತ್ತಿದ್ದವರು ಇವತ್ತು ನಮ್ಮ ಸ್ಮೃತಿಯೊಳಗೆಯೇ ಕೊಲೆಯಾಗಿ ಹೋಗಿದ್ದಾರೆ.

ಹೀಗೆ ಆಧುನಿಕತೆಯ ಪರಿಕರಗಳ ಕೆಳಗೆ ಬದುಕನ್ನೇ ಹಾಸಿ ಸ್ಮೃತಿಯಾಚೆಗೆ ಸರಿದವರನ್ನು ದಿ ಆರ್ಟಿಸ್ಟ್ ಬಿಟ್ಟೂ ಬಿಡದೆ ನೆನಪಿಸುತ್ತದೆ. ಆಧುನಿಕತೆಯೆಂದರೇ ಇದಲ್ಲವೇ.. ನೋಟುಗಳ ಜಾತ್ರೆಯಲ್ಲಿ ಶ್ರಮದ ಕೊಲೆ ! ದಿ ಆರ್ಟಿಸ್ಟ್ ಚಿತ್ರವೂ ತನ್ನೊಳಗಿನ ಒಳಹರಿವಿನಲ್ಲಿ ಇದನ್ನೇ ಮಾತನಾಡುತ್ತದೆ. ಇದು ಶಬ್ದಕ್ಕೆ ಬಸಿರಾದ ಮೌನದ ಕಥೆ. ಮಾತು ಕಥೆ ಎರಡೂ ಬೇಡದ ತಿಳಿನೀರಿನಂಥಹ ಪ್ರೇಮದ ಕಥೆ. ಚಿತ್ರದ ನಾಯಕ ವ್ಯಾಲಂಟೈನ್ ಮೌನ ಮತ್ತು ಶಬ್ದಕ್ಕೂ ಮಧ್ಯೆ ಬೆಂಕಿ ಸುರಿದ ಆಧುನಿಕತೆಗೆ ಒಗ್ಗಲು ನಿರಾಕರಿಸಿ ಮುಖ್ಯವಾಹಿನಿಯ ನಿರಾಕರಣೆಗೊಳಗಾಗುವುದು ಮತ್ತು ಸಹನಟಿಯೊಬ್ಬಳೊಟ್ಟಿಗೆ ಅನೂಹ್ಯವಾಗಿ ಹುಟ್ಟಿದ ಪ್ರೇಮದೊಳಗೆ ತ್ಯಕ್ತನಂತೆ ಅಲೆದಾಡುವುದು ಚಿತ್ರದ ಕಥಾ ಹಂದರ.

ಕಥೆಯ ಹರವು ತುಂಬ ಸರಳ. ವ್ಯಾಲಂಟೈನ್ ಎಂಬ 1920ರ ಕಾಲಘಟ್ಟದ ಮೂಕಿಚಿತ್ರಗಳ ಸೂಪರ್ಹಿಟ್ ಚಿತ್ರಗಳ ನಟನೊಬ್ಬ ಮೂಕಿಚಿತ್ರಗಳ ಯುಗದ ಯಶಸ್ವಿನಾಯಕ. ಅವನ ಅಭಿಮಾನಿಯಾಗಿದ್ದ ಪೆಪ್ಪಿ ಮಿಲ್ಲರ್ ಎಂಬಾಕೆ ಚಿತ್ರಪ್ರದರ್ಶನವೊಂದರ ನಂತರ ಮೀಡಿಯಾಗಳ ಎದುರಿನಲ್ಲಿಯೇ ಅವನನ್ನು ಚುಂಬಿಸುತ್ತಾಳೆ. ನಾಯಕನಟನ ಬದುಕಲ್ಲಿ ಯಾರೀ ಹೊಸ ಹುಡುಗಿ ಎಂದು ಮೀಡಿಯಾಗಳ ಹಲ್ಲಾಗುಲ್ಲಾದ ಕಾರಣಕ್ಕೆ ರೋಮಾಂಚನಗೊಳ್ಳುವ ಪೆಪ್ಪಿಮಿಲ್ಲರ್ ಆ ಸುದ್ದಿಯ ಪತ್ರಿಕೆಗಳನ್ನು ಹಿಡಿದು ತಾನೂ ಚಿತ್ರನಟಿಯಾಗ ಬಯಸುತ್ತಾಳೆ. ಸಹನರ್ತಕಿ, ಪೋಷಕನಟಿಯಂಥವೇ ಪಾತ್ರಗಳಲ್ಲಿ ಮುಖ ತೋರಿಸುವ ಮಟ್ಟಿಗೆ ಬೆಳೆದೂ ನಿಲ್ಲುತ್ತಾಳೆ.

ಅವಳು ನಟಿಸಿದ ಸಿನಿಮಾ ಟೈಟಲ್ಗಳಲ್ಲಿ ಕೊನೇಸಾಲಿನಲ್ಲಿರುತ್ತಿದ್ದ ಆಕೆಯ ಹೆಸರು ಬರುಬರುತ್ತಾ ಎರಡನೇ ಸಾಲಿಗೆ ಬರುವಮಟ್ಟಿಗೆ ಪೆಪ್ಪಿಮಿಲ್ಲರ್ ಬೆಳೆಯುತ್ತಾಳೆ. ನಡುವಯಸ್ಕ ಚಿತ್ರನಟ ವ್ಯಾಲೆಂಟೈನ್ ಎದುರು ಚಿತ್ರವೊಂದರಲ್ಲಿ ಸಹನಟಿಯಾಗಿ ನಟಿಸುವಾಗ ಇಬ್ಬರಿಗೂ ವಿನಾಕಾರಣದ ಪ್ರೀತಿ ಮೊಳೆತುಬಿಡುತ್ತದೆ. ನೇತುಹಾಕಿದ್ದ ಅವನ ಕೋಟಿನೊಳಗೆ ತನ್ನ ಕೈ ತೂರಿಸಿ ತನ್ನನ್ನು ತಬ್ಬಿಕೊಂಡು ವ್ಯಾಲಂಟೈನ್ನನ್ನು ಭ್ರಮಿಸುತ್ತಾಳೆ.

ಪೆಪ್ಪಿಯ ಮೋಹದೊಳಗೆ ಬೀಳುವ ವ್ಯಾಲೆಂಟೈನ್ ಇತರರಿಗಿಂತ ಬೇರೆಯಾಗಿ ಕಾಣಲು ನಿನ್ನೊಳಗೆ ಬೇರೆಯದ್ದೇ ಆದ ಒಂದಿರಬೇಕು ಎಂದು ಆಕೆಯ ತುಟಿಯ ಮೇಲೊಂದು ಚುಕ್ಕಿಯಿಟ್ಟು ಆಕೆಯನ್ನು ತನ್ನ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆರಿಸಿ ಚಿತ್ರದಲ್ಲಿ ನಟಿಸುತ್ತಾನೆ. ಚಿತ್ರ ಚೆನ್ನಾಗಿಯೇ ಓಡುತ್ತದೆ.. ಪೆಪ್ಪಿ ಈಗ ಹಾಲಿವುಡ್ನಲ್ಲಿ ಗುರುತಿಸಲ್ಪಟ್ಟಿದ್ದಾಳೆ. ನಂತರದ್ದು ಮೂಕಿ ಮತ್ತು ಟಾಕಿಚಿತ್ರಗಳ ನಡುವಿನ ಅಕ್ಷರಶಃ ಮುಖಾಮುಖಿ. ಸಿನಿಮಾಗಳೊಳಗೆ ಮಾತುಗಳನ್ನೂ ಶಬ್ದಗಳನ್ನೂ ಅಳವಡಿಸಬಹುದು ಎಂಬ ತಂತ್ರಜ್ಞಾನ ಹೊಸದಾಗಿ ಅನ್ವೇಷಿತಗೊಂಡಿದೆ.. ಶಬ್ದದ ಮಾಂತ್ರಿಕತೆಯಲ್ಲಿ ಸಿನಿಮಾ ನೋಡುಗರು ಯುವಕ ಯುವತಿಯರನ್ನು ಬಯಸುತ್ತಿದ್ದಾರೆ.

ಮಾತಿಲ್ಲದೆ ಮಣಮಣವೆಂದು ಬರೀ ಬಾಯಾಡಿಸುವ ಹಿರಿಯ ಚಿತ್ರನಟರ ಪಾಲಿಗೆ ಅವು ನಿರಾಕರಣೆಯ ಕಾಲಘಟ್ಟವಾಗಿ ಪರಿಣಮಿಸುತ್ತದೆ. ವ್ಯಾಲಂಟೈನ್ನ ಮೂಕಿನಾಣ್ಯಕ್ಕೆ ಟಾಕಿ ಮಾರುಕಟ್ಟೆಯಲ್ಲಿ ಚಲಾವಣೆಯ ಕಿಮ್ಮತ್ತು ರದ್ದುಗೊಂಡಿದೆ. ಶಬ್ದ ಮಾತುಗಳಲ್ಲಿ ವಾಚ್ಯವಾಗಿ ಹೇಳುವುದಕ್ಕಿಂತ ಮೌನದ ಅಮೂರ್ತತೆ ಮತ್ತು ಅನೂಹ್ಯತೆಯ ವಿವರಗಳು ಮೂಕಿಚಿತ್ರಗಳಲ್ಲಿ ಸಾಧ್ಯವೆಂಬ ವ್ಯಾಲಂಟೈನ್ನ ವಾದವನ್ನು ಅವನ ನಡುವಯಸ್ಸಿನೊಂದಿಗೇ ನೋಡುಗರು ತಿರಸ್ಕರಿಸಿದ್ದಾರೆ.

ಪ್ರೇಮಕಂಬನಿ ಎಂಬ ಅವನೇ ನಿದರ್ೇಶಿಸಿದ ಹೊಸಚಿತ್ರ ಮಕಾಡೆ ಮಲಗಿರುವ ವೇಳೆಯಲ್ಲೇ ಪೆಪ್ಪಿಮಿಲ್ಲರ್ಳ ಟಾಕಿಚಿತ್ರ ಸೂಪರ್ಹಿಟ್ ಆಗಿ ಪೆಪ್ಪಿ ಹಾಲಿವುಡ್ನ ಅನಭಿಶಕ್ತ ರಾಣಿಯಾಗಿದ್ದಾಳೆ. ನಡುವಯಸ್ಕ ವ್ಯಾಲಂಟೈನ್ ಶೇರುಮಾರುಕಟ್ಟೆ ಮತ್ತು ತಾರಾಮೌಲ್ಯದ ಕುಸಿತದಿಂದ ಈಗ ನಿರುದ್ಯೋಗಿ. ಆತನ ಪತ್ನಿಯೂ ವ್ಯಾಲಂಟೈನ್ನನ್ನು ಮಾತನಾಡು ಎನ್ನುತ್ತಾಳೆ.. ನಾನು ಮಾತನಾಡಲಾರೆ ಎನ್ನುವ ಉತ್ತರದೊಂದಿಗೆ ಸಂಸಾರವೂ ಹೋಳಾಗುತ್ತದೆ. ಮನೆಯ ಅಡುಗೆಯಾಳಿಗೆ ಸಂಬಳಕೊಡಲೂ ಹಣವಿಲ್ಲದ ಪರಿಸ್ಥಿತಿಯಲ್ಲಿ ತನ್ನ ಕೋಟುಗಳನ್ನು ಮಾರಿಕೊಂಡು ಕುಡಿತಕ್ಕೆ ಬೀಳುವ ವ್ಯಾಲಂಟೈನ್ನನ್ನು ಅವನ ನೆರಳೇ ಹಂಗಿಸುತ್ತಿದೆ. ಮನೆಯೂ ಸೇರಿದಂತೆ ಎಲ್ಲವನ್ನೂ ಮಾರಿಕೊಂಡು ತನ್ನ ನಾಯಿಯೊಟ್ಟಿಗೆ ಬೀದಿಗೆ ಬಿದ್ದಿದ್ದಾನೆ. ಮೋಹಿಸಿದ.. ಬೆಳೆಯಲು ಅನುವು ಮಾಡಿದ ಇವತ್ತಿನ ಪೆಪ್ಪಿಮಿಲ್ಲರ್ ಆತನೆದುರಿಗೆಯೇ ನಡುವಯಸ್ಕ ನಟರನ್ನೂ ಮೂಕಿ ಚಿತ್ರಗಳನ್ನೂ ಮಾತಾಡದ ಮಣಗುಟ್ಟುವ ವೃದ್ಧರು ಎಂದು ಹೀಗಳೆಯುತ್ತಾಳೆ. ವ್ಯಾಲಂಟೈನ್ ಪರಿತ್ಯಕ್ತಗೊಂಡವನಂತೆ ಅಡುಗೆಯಾಳಿಗೆ ಸಂಬಳಕ್ಕೆ ಬದಲಾಗಿ ಕಾರು ಕೊಟ್ಟು ಕೆಲಸದಿಂದ ತೆಗೆಯುತ್ತಾನೆ.

ಶಬ್ದ ಮಾತಿಲ್ಲದೆ ತಾನು ನಟಿಸಿದ್ದ ಮೂಕಿಚಿತ್ರಗಳ ರೀಲುಡಬ್ಬಗಳನ್ನು ತನ್ನ ಬಾಡಿಗೆ ಮನೆಯೊಳಗೆ ಕಿತ್ತು ಹರವಿ ಬೆಂಕಿಯಿಟ್ಟು ಸಹನಟಿ ಪೆಪ್ಪಿಮಿಲ್ಲರ್ ಮೇಲೆ ಮೋಹ ಹುಟ್ಟಿದ ದೃಶ್ಯವಿರುವ ಒಂದು ಡಬ್ಬವನ್ನು ಮಾತ್ರ ಜತನದಿಂದ ಎದೆಗಪ್ಪಿಕೊಂಡು ಆತ್ಮಹತ್ಯೆಗೆ ಯತ್ನ್ನಿಸಿದ್ದಾನೆ. ಬದುಕುಳಿಯುವ ವ್ಯಾಲಂಟೈನ್ನನ್ನು ಪೆಪ್ಪಿಯೇ ತನ್ನ ಮನೆಗೆ ಕರೆತಂದು ಆತನನ್ನು ಉಪಚರಿಸಿ ಆತನೊಟ್ಟಿಗೆ ಒಂದು ಚಿತ್ರವನ್ನು ನಿಮರ್ಿಸುವಂತೆ ನಿಮರ್ಾಪಕನೊಟ್ಟಿಗೆ ಜಗಳಕ್ಕೆ ಬಿದ್ದು ಗೆಲ್ಲುತ್ತಾಳೆ. ಮತ್ತೆ ಪೆಪ್ಪಿಮಿಲ್ಲರ್ಳೊಟ್ಟಿಗೆ ಟಾಕಿಚಿತ್ರದಲ್ಲಿ ನಟಿಸಲು ಶುರುವಿಡುವಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ. ಕಡೆಗೂ ಇಲ್ಲಿ ವ್ಯಾಲಂಟೈನ್ನ ಮೂಕಿಚಿತ್ರಗಳ ಮೇಲಿನ ಪ್ರೇಮದ ಮೇಲೆ ಶಬ್ದವನ್ನೊಳಗೊಂಡ ಟಾಕಿಚಿತ್ರಗಳ ಆಧುನಿಕತೆ ಸವಾರಿ ನಡೆಸುತ್ತವೆ..

ದೃಶ್ಯಗಳನ್ನು 1920ರ ಮೂಕಿಚಿತ್ರಗಳ ಯುಗದ ಶೈಲಿಯಲ್ಲಿ ಕಟ್ಟಿರುವ ನಿರ್ದೇಶಕ ಮೈಕೆಲ್ ಹಸಾನ್ ಇದು ಹಳೆಯದ್ದೇ ಮೂಕಿಚಿತ್ರವೇನೋ ಎಂಬ ಬಲವಾದ ಭ್ರಮೆ ಹುಟ್ಟಿಸುತ್ತಾರೆ. ಸಂಗೀತವೂ ಮೂಕಿಚಿತ್ರಕ್ಕೆ ಸಾಣೆತಟ್ಟಿಸಿ ಮಾಡಿಸಿದಂತಿದೆ. ಇವತ್ತಿನ ಅವತಾರ್ ಯುಗದ ಯಾವ ತಾಂತ್ರಿಕತೆಯೂ ಇಲ್ಲದೆ.. ಚೂರುವೇಗವಾಗಿ ಆವತ್ತಿನ ಸೀಮಿತ ತಾಂತ್ರಿಕತೆಯಂತೆ ಸಿನಿಮಾ ಚಲಿಸುತ್ತದೆ. ಮೌನದ ಮೇಲೆ ಶಬ್ದದ ಸವಾರಿ ಮತ್ತು ನಿಂಬೇಹೂವಿನ ಘಮದಂತಹ ನವಿರು ಪ್ರೇಮವೊಂದನ್ನು ಮಾತಿಲ್ಲದೆಯೇ ಹೇಳುವಲ್ಲಿ ನಿರ್ದೇಶಕ ಹಸಾನ್ ಅನಾಯಾಸವಾಗಿ ಗೆದ್ದಿದ್ದಾನೆ.

ಚಿತ್ರವು ನಮ್ಮದೇ ಕಸ್ತೂರಿನಿವಾಸ ಚಿತ್ರವನ್ನು ಬಹಳಷ್ಟು ಹೋಲುತ್ತದೆ.. ಒಂದೊಳ್ಳೆಯ ಪ್ರೇಮ ಯಾನವನ್ನು ಅನುಭವಿಸುವುದಕ್ಕಾದರೂ ದಿ ಆರ್ಟಿಸ್ಟ್ ಚಿತ್ರವನ್ನು ನೋಡಲೇಬೇಕು. ಮತ್ತೆ ಮತ್ತೆ ಬೀಸುವಕಲ್ಲು, ರುಬ್ಬುಕಲ್ಲುಗಳಿಗೆ ಮುಳ್ಳು ಹೊಯ್ಯುತ್ತಿದ್ದವರೂ.. ಬ್ಯಾನರ್ ಬರೆಯುತ್ತಿದ್ದ ಚಿತ್ರಕಲಾವಿದರೂ, ಎತ್ತಿಗೆ ಲಾಳ ಹೊಡೆದು ಬದುಕುತ್ತಿದ್ದವರೂ ನೆನಪಾಗುತ್ತಿದ್ದಾರೆ.. ಅವರೆಲ್ಲ ಎಲ್ಲಿಹೋದರೋ.. ಏನು ಮಾಡುತ್ತಿದ್ದಾರೋ.. ಇಂಥಹ ಜೀವಗಳನ್ನು ನವಿರಾಗಿ ನೆನಪಿಸಿದ ದಿ ಆರ್ಟಿಸ್ಟ್ ಗೆ ನನ್ನ ಸಲಾಂಗಳು.

Saturday 3 March 2012

ನಿಂಬೇಹೂವಿನ ಜೀವಗೀತೆ..

ಚೆಲ್ಲಿಕೊಳ್ಳಬೇಕಿದ್ದ ಮಾತುಗಳು ಗಂಟುಮೂಟೆಯೊಡನೆ
ಗುಳೇ ಎದ್ದು ಹೋಗಿದ್ದ ಒಂದು ರಾತ್ರಿ,
ಅರೆಬೆಂದ ಪದಗಳೊಟ್ಟಿಗೆ ಸಂಧಾನಕ್ಕೆಳಸಿದ್ದ ನನ್ನೊಳಗು
ಒಂದೂ ಪದ ಹುಟ್ಟಿಸದೆ ಸುಮ್ಮನೆ ಬೆಚ್ಚುತ್ತದೆ.

ಯಾವತ್ತೋ ಶರಬತ್ತಿಗೆ ಹಿಂಡಿ ಎಸೆದಿದ್ದ ನಿಂಬೇಹಣ್ಣಿನ
ಬೀಜದೊಡಲು ತುಂಬಿಕೊಂಡಿದ್ದು ಅದಕ್ಕೆ ಮಾತ್ರ ಗೊತ್ತಾಗಿ
ಕಾರೇಮುಳ್ಳುಗಳ ಪೊದೆಗಳ ಮಧ್ಯೆ
ನಿಂಬೇಗಿಡ ಮೈಯರಳಿಸಿದ್ದು ನನಗೂ ಗೊತ್ತಾಗಲಿಲ್ಲ.

ಯಾವ ಜಗದ ವಿವರಕ್ಕೂ ಪಕ್ಕಾಗದೆ ಮಿಟುಕುಗಣ್ಣು ತೆರೆದ
ನಿಂಬೇಗಿಡ ಅದರ ಪಾಡಿಗದು ಕೈಕಾಲು ಬೆನ್ನು ಮೂಡಿಸಿಕೊಂಡು
ಮುಖವೊಂದು ಮಾತ್ರ ಮೂಡದೆಯೇ, ದಕ್ಕದೆಯೇ ಹೋಗಿದ್ದು
ಅದರ ಧೇನಕ್ಕೂ ತಿಳಿಯಲಿಲ್ಲ. ಏನಕೇನ ನನ್ನ ಧೇನಕ್ಕೂ..

ಬೆಚ್ಚುತ್ತಿದ್ದ ನನ್ನೊಳಗು ಎಸೆದ ಬೀಜವನ್ನೇ ಮರೆತಿರುವಾಗ
ಉಜ್ಜದ ಹಲ್ಲನ್ನು ಮುಚ್ಚಿಕೊಂಡು ನಗುತ್ತಿದ್ದ ನಿಂಬೇಗಿಡದ
ಯೌವನದ ಬಿಸುಪನ್ನು ಯಾವ ಸತ್ತ ನೆನಪಲ್ಲಿ ಹುಡುಕುತ್ತದೆ.?
ಹಸೀಕೂಸಿನ ಎಳೇ ನಾಲಿಗೆಯಂಥ ನಿಂಬೇಎಲೆ ನನ್ನತ್ತ ನಗುತ್ತದೆ.

ದಾರಿತಪ್ಪಿ ಜೀವತೆತ್ತ ಬಸವನಹುಳುವಿನ ದೇಹದ ಪುಡಿ ತಿಂದು
ಅರಳಿಕೊಳ್ಳಲು ಹವಣಿಸುತ್ತಿದೆ ನಿಂಬೇಹೂವು
ನನ್ನೊಳಗು ಆವತ್ತು ನೋಡಿದ್ದು ಅದೇ ಹವಣಿಕೆಯನ್ನೇ..
ಬಾವಿಗೆ ಬಿದ್ದಂತಿದ್ದ ಒಳಗೊಳಗೆ ಈಗ ನಿಂಬೇಹೂವಿನ ಬೆಳಕು.

ಎಸೆದದ್ದೇ ಅರಳುತ್ತದೆಯಾದರೆ, ಕಟ್ಟಿಕೊಂಡ ಒಳಗೂ
ಬಿಮ್ಮಗೆ ಅರಳಬೇಕಲ್ಲ, ನಚ್ಚಗೆ ಬೆಳಗಬೇಕಲ್ಲ..
ತನ್ನಮೇಲೆ ತಾನೇ ಮಣ್ಣೆದುಕೊಳ್ಳಲು ಮುಖತೊಳೆಯುತ್ತಿದ್ದ ನನ್ನೊಳಗಿಗೆ
ನಿಂಬೇಹೂವಿನ ಜೀವಗೀತೆ ತಲೆನೇವರಿಸುತ್ತದೆ..

ನಾನು ಇನ್ನೇನೇನನ್ನು ಇನ್ನೆಲ್ಲೆಲ್ಲಿ ಎಸೆದೆನೋ..
ಅವೂ ಇಷ್ಟೊತ್ತಿಗೆ ಅರಳಿ ಪದ ಹಾಡುತ್ತಿರುವ ಗುಂಗಿಗೆ ಬಿದ್ದು
ಕಾರೇಮುಳ್ಳುಗಳ ಪೊದೆಗಳೊಗಳಗೆ ಬೆತ್ತಲೆಗೊಂಡು
ಕಣ್ಣು ಮರೆತ ಕಡವೆಯಂತೆ ನುಗ್ಗಾಡುತ್ತಿದ್ದೇನೆ..


- ಟಿ.ಕೆ. ದಯಾನಂದ