Wednesday 7 March 2012

ಅಲ್ಲಿ ಸಾವೂ ಇತ್ತು.. ಸಾಸಿವೆಯೂ ಇತ್ತು..

ಇದ್ದ ಗಂಡನೊಬ್ಬನೂ ಸತ್ತು.. ಆ ಜೀವದಹಕ್ಕಿ ಹಸಿದು ಕುಳಿತಿದೆ..
ಬೋಡುಬೆತ್ತಲಾದ ನಗ್ನ ಮರವೊಂದರ ಹೊಕ್ಕಳಲ್ಲಿ,
ಇಲ್ಲದ ಗೂಡೋ, ಇರುವ ಪಂಜರವೋ.. ಎರಡೂ ತಿಳಿಯದ
ಮಾಗಿದ ಹಳದಿಯೆಲೆಗಳು ಸುಮ್ಮಗೆ ಭೂಮಿಗುದುರುತ್ತಿವೆ.

ಹುಟ್ಟಿದ್ದೋ, ಇಟ್ಟದ್ದೋ, ಕೊಟ್ಟಿದ್ದೋ.. ಹೆಸರು ಬೆಂಕಿಯಂತೆ..
ಸೊಂಟ ಸುಟ್ಟ ಮರದ ಚರ್ಮದ ಬಣ್ಣ ಕಪ್ಪಗೆ ಹಕಳೆ,
ಬಾಣಂತನದ ಸೊಗಸಿಗೆ ಮುಖತಿರುವಿದ ಕೊಂಬೆಯ ಕಾಜಾಣ ಅಂದುಕೊಳ್ಳುತ್ತದೆ..
ದೂರದ ಸೊಟ್ಟಪಟ್ಟ ಮರದೊಳಗೆ ಇಟ್ಟ ಮೊಟ್ಟೆಯೇನಾದವು?

ಬಿದ್ದ ಭತ್ತದ ಕಾಳೊಳಗೆ ಹಾಲಿನ್ನೂ ತುಳುಕುತ್ತಿದೆ..
ಪಕ್ಕದ ಬೇಣದ ಇರುವೆಗಳ ಕೊಟ್ಟೆಮನೆಯೊಳಗೆ
ಸತ್ತ ಪುಟ್ಟಿರುವೆಯ ಹಣೆಯ ಮೇಲೆ ತಿನ್ನಲಾಗದ ಸಾಸುವೆ..
ಅಲ್ಲಿ ಸಾವೂ ಇತ್ತು.. ಸಾಸಿವೆಯೂ ಇತ್ತು.. ಬುದ್ದನೇ ಇರಲಿಲ್ಲ.

ಕಣ್ಣಿಗೆ ಸಿಗದ ತಾಯಿಯೊಬ್ಬಳು ಧೂಳಿನ ಮೇಲೆ ಬರೆಯುತ್ತಾಳೆ
ಇದು ನನ್ನದಲ್ಲ.. ಬೇರೆಯವರದ್ದೂ ಅಲ್ಲ.. ನಿನ್ನದು ಮಾತ್ರವಾಗಿ
ರೆಕ್ಕೆಕೊಕ್ಕಿನ ಮೇಲೆ, ರಾಗಿಕಾಳಿನಂಥ ಎದೆಯ ಮೇಲೆ..
ನಾನು ಬರೆದದ್ದಷ್ಟೇ ನಿನ್ನದು. ಉಳಿದದ್ದು ಶೂನ್ಯಕ್ಕೆ..

ಯಾರೋ ಗಾಳಿಯ ನಂಚಿಕೊಂಡು ಬೆಳಕಿನ ಚೂರು ತಿನ್ನುತ್ತ,
ಕಣ್ಣಿರುವ ಪ್ರೀತಿಗೆ ಸುಟ್ಟಮರದ ಬುಡದಡಿ ತಡಕಾಡುತ್ತಿದ್ದಾರೆ..
ಎಲ್ಲಿಂದಲೋ ತೆವಳಿ ಇಲ್ಲೇ ಬದುಕುತ್ತಿದ್ದ ಕೇದಗೆಪೊದೆಯ ಹಾವೊಂದು
ಪೊರೆ ಕಳಚಿಕೊಳ್ಳಲು ಕತ್ತಲಿರುವ ತಾವೊಂದ ಹುಡುಕುತ್ತಿದೆ.
- ಟಿ.ಕೆ. ದಯಾನಂದ

No comments:

Post a Comment