Monday 16 April 2012

ಕಟ್ಟೆಚ್ಚರ: ನ್ಯೂಸ್ ಚಾನಲ್‌ಗಳಲ್ಲಿ ಈಗ ಸೆಕ್ಸ್ ವಿಡಿಯೋಗಳು ಪ್ರಸಾರವಾಗುತ್ತವೆ...


"ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ "

ನಮಸ್ಕಾರ,

ಮೊದಲಿಗೆ ಒಂದು ಪತ್ರಿಕೆ ಹಾಗೂ ಟಿವಿವಾಹಿನಿಯೊಂದರ ಸಂಪಾದಕ ಎರಡೂ ಆಗಿರುವ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಇಷ್ಟು ದಿವಸ ಅಶ್ಲೀಲ ಚಿತ್ರಗಳೆಂದರೆ ನಗರಪ್ರದೇಶಗಳ ಹೊರವಲಯದ ಮತ್ತು ಸಣ್ಣಪುಟ್ಟ ಊರುಗಳ ಟೆಂಟುಗಳಲ್ಲಿ ಬೆಳಗಿನ ಪ್ರದರ್ಶನ ಕಾಣುತ್ತಿದ್ದ ಹಸಿಬಿಸಿ ಮಲಯಾಳಂ ಚಿತ್ರಗಳೆಂದೇ ಪ್ರಚಲಿತದಲ್ಲಿತ್ತು. ಆದರೀಗ ಅಶ್ಲೀಲ ಚಿತ್ರಗಳನ್ನು ನೋಡಬೇಕೆಂದರೆ ಅಷ್ಟುದೂರ ಮುಖಮರೆಸಿಕೊಂಡು ಹೋಗುವ ಅಗತ್ಯವಿಲ್ಲ ಸುವರ್ಣನ್ಯೂಸ್ ಚಾನೆಲ್ ನೋಡಿದರೆ ಸಾಕು ಎಂಬ ಧೈರ್ಯವನ್ನು ರಾಜ್ಯದ ಜನರಿಗೆ ರವಾನಿಸಿದ್ದಕ್ಕಾಗಿ ನಿಮ್ಮನ್ನು ನಿಜಕ್ಕೂ ಅಭಿನಂದಿಸಬೇಕು.

ಎರಡನೆಯದಾಗಿ ಮಾಧ್ಯಮರಂಗದ ಆಳ ಅಗಲಗಳು ಮತ್ತು ಮಾಧ್ಯಮಲೋಕದಲ್ಲಿ ಯಾವುದು ಸರಿ ಯಾವುದು ಸರಿಯಲ್ಲ, ನೈತಿಕತೆ ಮತ್ತು ಅನೈತಿಕತೆಯ ನಡುವಿನ ತೆಳುಗೆರೆಗಳನ್ನು ಪುಂಖಾನುಪುಂಖವಾಗಿ ಬರೆದಿದ್ದೀರಿ, ಬರೆಯುತ್ತಲೂ ಇದ್ದೀರಿ. ಅವುಗಳೆಲ್ಲವನ್ನೂ ನಾವುಗಳೂ ಓದಿದ್ದೇವೆ. ಈಗ ಒಂದು ಪ್ರಶ್ನೆಯೆದ್ದಿದ್ದೆ. ಇಷ್ಟೆಲ್ಲವನ್ನೂ ಬರೆಯುವ ತಾವು, ಇಷ್ಟೆಲ್ಲ ಜಗತ್ತಿನ ವಿವಿಧ ಪತ್ರಿಕೋದ್ಯಮಿಗಳು ಮತ್ತು ಸಾಹಸಿಗ ಪತ್ರಕರ್ತರ ಬಗ್ಗೆ ದಿವೀನಾಗಿ ಬರೆದುಕೊಳ್ಳುವ ನೈತಿಕತೆ ಇವತ್ತು ಸಂತೆಯಲ್ಲಿ ಅರೆಬೆತ್ತಲಾಗಿ ನಿಂತುಕೊಂಡಿದೆ. ಇದೇ ಮಾರ್ಚ್ ೨೯ರ ರಾತ್ರಿ ೧೦ ಗಂಟೆಗೆ ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ತಾವು ಇಲ್ಲಿಯವರೆಗೂ ಹೇಳಿಕೊಂಡು ಬಂದ ಮಾಧ್ಯಮ ನೈತಿಕತೆ ಮತ್ತು ಸಂಹಿತೆಗಳೆರಡರ ಮುಖಕ್ಕೂ ಡಾಂಬರು ಬಳಿಯುವಂತಹ ಒಂದು ಕಂತು ಪ್ರಸಾರವಾಯಿತು.

ಶಿವಮೊಗ್ಗದ ಕಾಲೇಜು ಯುವತಿಯೊಬ್ಬಳು ತನ್ನ ಪ್ರಿಯಕರನೊಡನೆ ರತಿಕ್ರೀಡೆಯಲ್ಲಿ ತೊಡಗಿದ್ದ ಅಸಹ್ಯ ಹುಟ್ಟಿಸುವ ವಿಡಿಯೋದೃಶ್ಯಗಳು ಯಾವ ಎಡಿಟಿಂಗೂ ಇಲ್ಲದಂತೆ ಹಸಿಹಸಿಯಾಗಿಯೇ ಪ್ರಸಾರವಾಯಿತು. (ವಿಡಿಯೋ ಮಬ್ಬಾಗಿದ್ದರೂ ಆ ಕ್ರಿಯೆಯ ಎಲ್ಲ ಹಂತಗಳೂ ಸುಸ್ಪಷ್ಟವಾಗಿ ಕಾಣಿಸುತ್ತಿದ್ದುದು ನೋಡಿದ ಜನರಿಗೆ ಗೊತ್ತು) ಈ ವಿಡಿಯೋ ತುಣುಕುಗಳು ಶಿವಮೊಗ್ಗೆಯ ಪಡ್ಡೆಹುಡುಗರ ಮೊಬೈಲುಗಳಲ್ಲಿ ಹರಿದಾಡುವುದನ್ನು ನೋಡಿದ ನಿಮ್ಮ ಶಿವಮೊಗ್ಗ ಜಿಲ್ಲಾ ವರದಿಗಾರ ಆ ವಿಡಿಯೋ ಸಂಪಾದಿಸಿ ಅದನ್ನು ಇರುವ ಹಾಗೆಯೇ ಸುವರ್ಣನ್ಯೂಸ್ ಕಚೇರಿಗೆ ತಲುಪಿಸಿದ್ದಾರೆ. ಪ್ರೇಮಸಲ್ಲಾಪದ ವಿಡಿಯೋ ಸೋರಿಕೆಯಾಗಿ ಊರಿನವರ ಮೊಬೈಲಿನಲ್ಲಿ ಹರಿದಾಡುತ್ತಿರುವುದು ಯುವತಿಯ ಗಮನಕ್ಕೂ ಬಂದು ಮಾನಕ್ಕೆ ಅಂಜಿದ ಆಕೆ ಆತ್ಮಹತ್ಯೆಗೆ ಯತ್ನಿಸಿ ಪರವೂರಿನ ಆಸ್ಪತ್ರೆಯೊಂದರಲ್ಲಿ ಸಾವುಬದುಕಿನ ನಡುವೆ ಹೋರಾಡಿ ಜೀವವುಳಿಸಿಕೊಂಡಿದ್ದಾಳೆ. ಪ್ರಸ್ತುತ ಬೆಂಗಳೂರಿನ ಆಕೆಯ ಸಂಬಂಧಿಯೊಬ್ಬರ ಮನೆಯಲ್ಲಿದ್ದಾಳೆ. ಇದು ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದ ಹೂರಣ.

ಇಂತಹದ್ದೊಂದು ಸೂಕ್ಷ್ಮ ವಿಷಯವನ್ನು ಕಾರ್ಯಕ್ರಮವಾಗಿ ಬದಲಾಯಿಸುವಾಗ ಕಟ್ಟೆಚ್ಚರ ಕಾರ್ಯಕ್ರಮ ತಂಡ ಬಹಳಷ್ಟು ಎಡವಟ್ಟುಗಳನ್ನು ಮಾಡಿಕೊಂಡಿದೆ. ಅವಾಂತರಕ್ಕೆ ಮಾಡಿಕೊಂಡ ಯುವತಿಯ ಫೋಟೋವನ್ನು ಕಣ್ಣು ಮಾತ್ರ ಮರೆಮಾಡಿ ಪ್ರಸಾರವಾಯಿತು, ಆಕೆ ತನ್ನ ಪ್ರಿಯಕರನೊಡನೆ ನಡೆಸಿದ ಸಲ್ಲಾಪದ ಉದ್ರೇಕಕಾರಿ ತುಣುಕುಗಳು ಹೇಗಿವೆಯೋ ಹಾಗೆಯೇ ಪ್ರಸಾರವಾಯಿತು, ಜೊತೆಗೆ ಆಕೆ ಈಗ ಉಳಿದುಕೊಂಡಿರುವ ಬೆಂಗಳೂರಿನ ಸಂಬಂಧಿಗಳ ಮನೆಯ ವಿಳಾಸವನ್ನೂ ಪ್ರಸಾರ ಮಾಡಲಾಯಿತು. ಆಕೆಯ ಸಹಪಾಠಿಗಳನ್ನು ಸಂದರ್ಶನದ ಹೆಸರಿನಲ್ಲಿ ಮಾತನಾಡಿಸಲಾಯಿತು. (ಇವರ ಮುಖವೂ ಸಹ ಮಬ್ಬು ಮಾಡಲಾಗಿಲ್ಲ) ಇಷ್ಟೆಲ್ಲ ವಿವರಗಳನ್ನು ಸೂಕ್ಷ್ಮ ವಿಷಯವೊಂದರ ಮೇಲಿನ ಕಾರ್ಯಕ್ರಮದಲ್ಲಿ ಆಕೆಯ ವಿಳಾಸದ ಸಮೇತ ಹರಿದು ಹಂಚಲಾಯಿತು. ಒಟ್ಟು ಕಾರ್ಯಕ್ರಮವೇ ಆಕೆ ಮಾಡಿದ ಎಡವಟ್ಟಿಗೆ ಆಕೆಯ ಪೋಷಕರನ್ನು ನಡುರಸ್ತೆಯಲ್ಲಿ ಮಾನಕಳೆಯುವುದಕ್ಕಾಗಿಯೇ ರೂಪಿಸಿದಂತಿತ್ತು.

ಸರಿ ಆಕೆ ಮಾಡಿದ್ದು ಕ್ಷಮೆಗೆ ಅರ್ಹವಲ್ಲದ್ದೇ ಇರಬಹುದು, ಆದರೆ ಆಕೆಯ ಹೆತ್ತವರು, ಅಣ್ಣತಮ್ಮಂದಿರು, ಅಕ್ಕತಂಗಿಯರು, ನೆರೆಹೊರೆಯವರು, ಸಂಬಂಧಿಗಳು, ಸಹಪಾಠಿಗಳು ಇವರೆಲ್ಲರೂ ಕಟ್ಟೆಚ್ಚರ ಕಾರ್ಯಕ್ರಮದ ಕಾರಣಕ್ಕೆ, ಇಂಥಹ ಹುಡುಗಿಗೆ ಸಂಬಂಧಿಸಿದವರು ಎಂದು ಸಮಾಜ ಕೆಟ್ಟದಾಗಿ ಮಾತಾಡುವುದನ್ನು ಅದು ಹೇಗೆ ಇವರೆಲ್ಲ ಸಹಿಸಬೇಕು? ಪರೀಕ್ಷೆಯಲ್ಲಿ ಅಂಕ ಕಡಿಮೆ ಎಂದೋ, ರಂಗೋಲಿ ತುಳಿದದ್ದಕ್ಕೆ ಬೈದರೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಇಂದಿನ ದಿನಗಳಲ್ಲಿ, ಇವರೆಲ್ಲರನ್ನು ಅಪರಾಧಿಗಳಂತೆ ಕಟಕಟೆಯೊಳಗೆ ತಂದು ನಿಲ್ಲಿಸಿರುವ ಸುವರ್ಣನ್ಯೂಸ್ ಇವರಿಗೆ ಮುಂದಿನ ದಿನಗಳಲ್ಲಿ ಸಮಾಜದಿಂದ ಎದುರಿಸಬೇಕಾದ ಪ್ರಶ್ನೆಗಳು ಮತ್ತು ಮೂದಲಿಕೆಗಳನ್ನು ತಡೆಯಲು ಸಾಧ್ಯವಿದೆಯೇ? ಆ ಸಂಸಾರ ಅವಮಾನವಾಯಿತೆಂದು, ತಲೆ ಎತ್ತಿ ಓಡಾಡಲು ಸಾಧ್ಯವಿಲ್ಲವೆಂದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಹೊಣೆ ಯಾರು?

ಅದನ್ನು ಪಕ್ಕಕ್ಕಿಡೋಣ, ಉಳಿದೆಲ್ಲದಕಿಂತ ಮೊದಲು ಇದು ಮಾಧ್ಯಮದ ನೈತಿಕತೆಯ ಪ್ರಶ್ನೆ. ಅಶ್ಲೀಲ ಎಮ್ಮೆಮ್ಮೆಸ್‌ಗಳನ್ನು ಪ್ರಸಾರ ಮಾಡದೆ ಒಂದು ಟಿವಿ ಚಾನೆಲ್ ಬದುಕಲು ಸಾಧ್ಯವೇ ಇಲ್ಲವೇ, ಈ ಹಿಂದೆ ಸದನದೊಳಗೆ ನೀಲಿಚಿತ್ರ ವೀಕ್ಷಿಸಿದ ಶಾಸಕರ ದೃಶ್ಯಗಳನ್ನು ಪ್ರಸಾರ ಮಾಡಿದ್ದರ ಬಗ್ಗೆ ವಿರೋಧ ವ್ಯಕ್ತವಾದಾಗಲೂ ತಾವು ತೋರಿಸೋದು ತಪ್ಪಾ ಅಂತ ತಮ್ಮ ಅಶ್ಲೀಲ ದೃಶ್ಯ ಪ್ರಸಾರದ ಸಮರ್ಥನೆಗೆ ಅಂಟಿಕೊಂಡಿರಿ. ಬಸ್ ಸ್ಟಾಂಡುಗಳಲ್ಲಿ, ಬುಕ್‌ಸ್ಟೋರ್‌ಗಳಲ್ಲಿ ನೇತಾಡುವ ೧೦ ರೂಪಾಯಿಗೆ ಸಿಗುವ ಅಶ್ಲೀಲಚಿತ್ರಗಳ ಕಥೆಗಳ ಅಗ್ಗದ ಪುಸ್ತಕಗಳಿಗೂ ತಾವು ಪದೇಪದೇ ಪ್ರಸಾರಿಸುತ್ತಿರುವ ಅಶ್ಲೀಲ ಎಮ್ಮೆಮ್ಮೆಸ್ ಕಾರ್ಯಕ್ರಮಗಳಿಗೂ ಕಿಂಚಿತ್ತಾದರೂ ವ್ಯತ್ಯಾಸವಿದೆಯೇ? ಹಿಂದೊಮ್ಮೆ ಅಶ್ಲೀಲ ವಿಡಿಯೋಗಳನ್ನು ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ವೆಬ್‌ಸೈಟ್ ಅಡ್ರೆಸ್‌ಗಳ ಮೂಲಕವೇ ಪ್ರಸಾರ ಮಾಡಿದವರು ನೀವು. ಡಿವಿಡಿ ಅಂಗಡಿಗಳಲ್ಲಿಯೂ ಅಶ್ಲೀಲ ಡಿವಿಡಿಗಳನ್ನು ಮುಜುಗರದಿಂದಲೋ, ಭಯದಿಂದಲೋ ಕದ್ದುಮುಚ್ಚಿ ವಿತರಿಸುವ ಪರಿಪಾಠವಿದೆ. ಅವರಿಗಿರುವ ಕನಿಷ್ಠಮಟ್ಟದ ಭಯವೂ ಸುವರ್ಣನ್ಯೂಸ್ ಸಂಪಾದಕರಾದ ತಮಗಿಲ್ಲ, ರಾಜಾರೋಷವಾಗಿ ಎಗ್ಗುಸಿಗ್ಗಿಲ್ಲದೆ ಬ್ಲೂಫಿಲ್ಮ್‌ಗಳನ್ನೇ ಪ್ರಸಾರ ಮಾಡಿಬಿಡುತ್ತೀರಿ, ತುಂಬು ಕುಟುಂಬವೊಂದರಲ್ಲಿ ಅಣ್ಣತಂಗಿ, ಅಪ್ಪಮಗಳು ಏನನ್ನೋ ನೋಡಲು ಹೋಗಿ ತಾವು ಪ್ರಸಾರಿಸುತ್ತಿರುವ ಸುಸಂಸ್ಕೃತ ಬ್ಲೂಫಿಲ್ಮ್‌ಗಳನ್ನೋ, ಅಶ್ಲೀಲ ಎಮ್ಮೆಮ್ಮೆಸ್ ತುಣುಗಳನ್ನೋ ಅಕಸ್ಮಾತ್ ನೋಡಿದರೂ ಆಗುವ ಮುಜುಗರ ಕಸಿವಿಸಿಯಿದೆಯಲ್ಲ.. ಬಹುಶಃ ಅದರ ಅನುಭವ ತಮಗೆ ಆದಂತಿಲ್ಲ. ಮಾನ ಮರ್ಯಾದೆಯಿರುವ ಜನಕ್ಕೆ ಮುಖಮುಚ್ಚಿಕೊಂಡು ಎದ್ದು ಹೋಗಬೇಕೆನಿಸುತ್ತದೆ.

ತಾವು ಕನ್ನಡಪ್ರಭ ಪತ್ರಿಕೆಗೂ ಸಂಪಾದಕರು. ಅದರಲ್ಲಿ ಬರೆಯುವ ಅಂಕಣಕಾರರೂ ಸೇರಿದಂತೆ ಹಲವಾರು ಬರಹಗಾರರಿಂದ ಭಾರತೀಯ ಸಂಸ್ಕೃತಿ ಪರಂಪರೆ ನೈತಿಕತೆಯ ಬಗ್ಗೆ ಬರೆಸುತ್ತೀರಿ. ಇನ್ನೊಂದು ಕಡೆಯಲ್ಲಿ ಈ ವಿಷಯಗಳಿಗೆ ತದ್ವಿರುದ್ಧವಾಗಿರುವ ಕಾಮಕೇಳಿಗಳನ್ನು ಯಾವ ಅಂಜಿಕೆಯೂ ಇಲ್ಲದೆ ಪ್ರಸಾರ ಮಾಡುತ್ತೀರಿ, ಜನ ನೋಡುತ್ತಾರೆ ಟಿಆರ್‌ಪಿ ಬರುತ್ತದೆ ಎಂದು ಕಂಡಕಂಡದ್ದನ್ನೆಲ್ಲ ಪ್ರಸಾರ ಮಾಡುವುದಾದರೆ ನೇರವಾಗಿ ಒಂದು ಅಶ್ಲೀಲ ಟಿವಿವಾಹಿನಿಯನ್ನೇ ತಾವು ಧೈರ್ಯವಾಗಿ ಪ್ರಾರಂಭಿಸುವುದು ಒಳ್ಳೆಯದು. ಅಂತರ್ಜಾಲದಲ್ಲಿ ಅಶ್ಲೀಲ ಎಮ್ಮೆಮ್ಮೆಸ್ಸುಗಳಿಗೇನೂ ಕೊರತೆಯಿಲ್ಲ, ತಮ್ಮ ಚಾನೆಲ್‌ನ ಟಿಆರ್‌ಪಿಗೂ ಜಾಹಿರಾತಿಗೂ ಈ ಎಮ್ಮೆಮ್ಮೆಸ್ಸುಗಳಿಂದ ಇನ್ನಷ್ಟು ಒಳ್ಳೆಯದಾಗುತ್ತದೆ. ಸುವರ್ಣನ್ಯೂಸ್ ಚಾನೆಲ್ ಸದ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರೀತಿ ಮತ್ತು ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಮೇಲೆ ತಮಗೆ ಹಿಡಿತವೇ ಇದ್ದಂತಿಲ್ಲ, ಅಥವಾ, ಆ ಅಧಿಕಾರವನ್ನು ಚಾನೆಲ್ ಮಾಲೀಕರು ತಮಗೆ ಕೊಟ್ಟೇ ಇಲ್ಲ, ಬದಲಾಗಿ ಡಮ್ಮಿ ಸಂಪಾದಕರಂತೆ ತಾವು ಕುರ್ಚಿಯಲ್ಲಿ ಕುಳಿತಿರಬಹುದೇ? ಎಂಬ ಅನುಮಾನಗಳು ಬರುತ್ತಿವೆ. ಏಕೆಂದರೆ ತಾವು ಕನ್ನಡಪ್ರಭದಲ್ಲಿ ಸುಸಂಸ್ಕೃತರಂತೆ ಆಡುವುದು ಒಂದು, ಸುವರ್ಣನ್ಯೂಸ್‌ನಲ್ಲಿ ಅಪಾಪೋಲಿಗಳಂತೆ ಮಾಡುತ್ತಿರುವುದು ಇನ್ನೊಂದು.

ಪ್ರಸ್ತುತ ವಿಷಯಕ್ಕೆ ಮರುಳುವುದಾದರೆ ಆ ಯುವತಿಯ ಪೋಷಕರನ್ನು ನಡುಬೀದಿಯಲ್ಲಿ ನೀವು ಇವತ್ತು ತಂದು ನಿಲ್ಲಿಸಿರುವಂತೆಯೇ ತಾವೂ ಹಿಂದೊಮ್ಮೆ ಇದ್ದ ಕೆಲಸದಿಂದ ಹೊರದಬ್ಬಿಸಿಕೊಂಡು ನಡುಬೀದಿಯಲ್ಲೇ ನಿಂತಿದ್ದೀರಿ. ಆವತ್ತು ಇದೇ ಜಗತ್ತು ತಮ್ಮತ್ತ ತೂರಿದ ಕಲ್ಲುಗಳ ಸೈಜು ಎಂಥವು ಎಂಬುದು ತಮಗೂ ಗೊತ್ತು. ಅಂತಹ ಅವಮಾನವನ್ನು ಸಹಿಸಿದವರು ತಾವು. ಆ ನೆನಪಿನ ನೈತಿಕತೆ ತಮಗೆ ಇದ್ದಿದ್ದರೆ ಇವತ್ತು ಶಿವಮೊಗ್ಗದ ಒಂದು ಕುಟುಂಬವನ್ನು ಇವತ್ತು ಮೂರಾಬಟ್ಟೆಯಾಗುವಂತೆ ಮಾನ ಕಳೆಯುತ್ತಿರಲಿಲ್ಲ. ಕೈಯಿಟ್ಟಲ್ಲೆಲ್ಲ ಸುದ್ದಿ ಸಿಗುವ, ಸರ್ಕಾರಿ ಇಲಾಖೆಗಳ ಹಗರಣಗಳು ಕಾಲುಕಾಲಿಗೇ ತೊಡರುತ್ತಿರುವ ಈ ಸಮಯದಲ್ಲಿ ತಮ್ಮ ಹಾರ್ಡ್‌ಕೋರ್ ವರದಿಗಾರರು ಆ ಎಲ್ಲವನ್ನೂ ಬಿಟ್ಟು ಸುಲಭಕ್ಕೆ ಕೈಗೆ ಸಿಗುವ ಅಶ್ಲೀಲ ಎಮ್ಮೆಮ್ಮೆಸ್ಸುಗಳ ಹಿಂದೇಕೆ ಬೀಳುವಷ್ಟು ಸೋಮಾರಿಗಳಾಗಿದ್ದಾರೆ ಎಂಬುದು ತಮ್ಮ ಅರಿವಿಗೆ ಯಾಕೋ ಬರುತ್ತಲೇ ಇಲ್ಲ. ಈ ಎಮ್ಮೆಮ್ಮೆಸ್ಸುಗಳನ್ನು ನೋಡಿ ಯಾರಿಗೇನು ಆಗಬೇಕಿದೆ, ಇವನ್ನು ತೋರಿಸಿ ಯಾರಿಗೆ ಎಂಥಹ ಸಂದೇಶ ಕೊಡುವ ಘನಕಾರ್ಯ ಮಾಡುತ್ತಿದ್ದಿರೋ ನಮಗೆ ಗೊತ್ತಿಲ್ಲ. ಹೀಗೆಲ್ಲ ದುಡ್ಡು ದುಡಿಯಬೇಕೇ ವಿಶ್ವೇಶ್ವರ ಭಟ್ಟರೆ?

ಕಟ್ಟೆಚ್ಚರ ಕಾರ್ಯಕ್ರಮದ ಅಧ್ವಾನಗಳಾದರೂ ಎಂಥವು, ಬೆಳಗ್ಗೆಹೊತ್ತು ಬ್ರೇಕ್‌ಫಾಸ್ಟ್ ನ್ಯೂಸ್‌ನಲ್ಲಿ ಕೈ ಮುಗಿಯಬೇಕೆನ್ನಿಸುವಷ್ಟು ಸಂಭಾವಿತರಾಗಿ ಕಾಣಿಸಿಕೊಳ್ಳುವ ಜಯಪ್ರಕಾಶಶೆಟ್ಟರು ರಾತ್ರಿಯಾದರೆ ಸಾಕು ಕಟ್ಟೆಚ್ಚರದೊಳಗೆ ಜಾತ್ರೆಯಲ್ಲಿ ಟೋಪಿ ಮಾರುವವರಂತೆ ಹಾಸ್ಯಾಸ್ಪದ ಪೋಷಾಕಿನಲ್ಲಿ ಕರೆಂಟು ಹೊಡೆಸಿಕೊಂಡವರಂತೆ ಮೈಕೈ ಬಳುಕಿಸುತ್ತ ಆಗಾಗ ಕೂಗಾಡುತ್ತ ಆಂಕರಿಂಗ್ ಮಾಡುತ್ತಿರುತ್ತಾರೆ. ಅವರ ಮಾತಿನ ಶೈಲಿ ಮತ್ತು ಐಟಂಸಾಂಗ್ ಶೈಲಿಯ ಅವರ ಆಂಕರಿಂಗ್ ನಗೆಪಾಟಲಲ್ಲದೆ ಇನ್ನೇನೂ ಅಲ್ಲ, ಶಿವಮೊಗ್ಗದ ಯುವತಿಯ ಎಪಿಸೋಡಿನ ಸ್ಕ್ರಿಪ್ಟನ್ನು ಸಹನಾಭಟ್ ಎಂಬ ಸ್ತ್ರೀ ಬರೆಯುತ್ತಾರೆ ಅಂದರೆ ವಾಕರಿಕೆ ಹುಟ್ಟುತ್ತದೆ. ಕೆಲಸಮರೆತ ಜಿಲ್ಲಾ ವರದಿಗಾರನೊಬ್ಬ ಎಂಥದೋ ಎಬಡೇಶಿ ಎಮ್ಮೆಮ್ಮೆಸ್ ಕಳಿಸಿದೆಂದ ಮಾತ್ರಕ್ಕೆ ಅದನ್ನು ಪ್ರಸಾರಿಸಬೇಕೇ ಬೇಡವೇ, ನೈತಿಕತೆಯೇ ಅನೈತಿಕತೆಯೇ ಎಂಬ ವಿವೇಚನೆಯೂ ಇಲ್ಲದಷ್ಟು ಒಬ್ಬ ಟಿವಿ ಚಾನೆಲ್ಲಿನ ಸಂಪಾದಕ ಎಮ್ಮೆಚರ್ಮದವರಾಗಿ ಹೋದರೆ ಏನೇನೆಲ್ಲ ಅನಾಹುತಗಳಾಬೇಕೋ ಅವೆಲ್ಲವೂ ಸುವರ್ಣನ್ಯೂಸಿನಲ್ಲಿ ಇವತ್ತು ಆಗುತ್ತಿವೆ. ಸುವರ್ಣನ್ಯೂಸಿನ ಬದಲು ಎಫ್ ಚಾನೆಲ್ ನೋಡುವುದು ಒಳಿತು ಎಂಬ ಮಟ್ಟಿಗೆ ಜೋಕುಗಳು ಹುಟ್ಟಿಕೊಂಡಿವೆ. ತಮಗೆ ತಮ್ಮ ಜನಪರ ನ್ಯೂಸುಗಳ ಪ್ರಸಾರದಿಂದ ಕರ್ನಾಟಕವನ್ನು ಉದ್ದಾರ ಮಾಡಿಬಿಡುವ ಸಾಹಸ ಬೇಡವಾಗಿದ್ದಾಗ ಮಾತ್ರ ಮದನಾರಿಯಂತಹ ಅಡ್ಡಕಸುಬಿ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಒಂದುಕಾಲದಲ್ಲಿ ಜನ ನೋಡುತ್ತಾರೆ ಅಂತ ಕೇರಳದ ಚಿತ್ರರಂಗದಲ್ಲಿ ತನ್ನ ಉಬ್ಬುತಗ್ಗುಗಳನ್ನು ತೋರಿಸಿಕೊಂಡು ಅಶ್ಲೀಲಚಿತ್ರಗಳಲ್ಲಿ ನಟಿಸಿದ ನಟಿಯೊಬ್ಬಳಿಗೂ... ಎಮ್ಮೆಮ್ಮೆಸ್ಸು, ಬ್ಲೂಫಿಲ್ಮ್, ಮದನಾರಿಗಳ ಹಿಂದೆ ಬಿದ್ದಿರುವ ತಮಗೂ ನಡುವೆ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ಎರಡರಲ್ಲೂ ದುಡ್ಡೇ ಪ್ರಮುಖವಾಗಿದೆ.

ಕೊನೆಗೆ ವಿಶ್ವೇಶ್ವರ ಭಟ್ಟರಲ್ಲಿ ಒಂದು ಮನವಿ, ನೀವು ಕನ್ನಡಪ್ರಭದ ಅಂಕಣಕಾರನ್ನು ಸುವರ್ಣನ್ಯೂಸ್ ಟಾಕ್ ಶೋಗಳ ಅತಿಥಿಗಳನ್ನಾಗಿಯೂ, ಈ ಚಾನೆಲ್ಲಿನ ಚಿಳ್ಳೆಪಿಳ್ಳೆ ವರದಿಗಾರರನ್ನು ಕನ್ನಡಪ್ರಭದ ಅಂಕಣಕಾರನ್ನಾದರೂ ಮಾಡಿಕೊಳ್ಳಿ. ಈ ಅಧ್ವಾನಗಳನ್ನು ಟಿವಿ ನೋಡುವ ಮಂದಿ ಹೇಗಾದರೂ ಸಹಿಸಬಲ್ಲರು, ಆದರೆ ಕಾಮ, ಸೆಕ್ಸು. ಹೆಂಗಸಿನ ಉಬ್ಬುತಗ್ಗುಗಳ ಮೇಲೆ ಬೀಳುವ ಚಿಲ್ಲರೆ ಕಾಸುಗಳನ್ನು ಆಯ್ದುಕೊಳ್ಳುತ್ತಿರುವ ಈ ನೀಚತನವಿದೆಯಲ್ಲ, ಅದನ್ನು ಮಾನವಂತರಾರೂ ಸಹಿಸುವುದಿಲ್ಲ. ಈಗಾಗಲೇ ತಮ್ಮ ಚಾನೆಲ್ಲಿನ ನಗೆಪಾಟಲು ಕಾರ್ಯಕ್ರಮವಾದ ಕಟ್ಟೆಚ್ಚರದಲ್ಲಿ ಶಿವಮೊಗ್ಗದ ಎಮ್ಮೆಮ್ಮೆಸ್ ಕಾರ್ಯಕ್ರಮದ ಬಗ್ಗೆ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್‌ಗೆ ಆನ್‌ಲೈನ್ ದೂರುಗಳು ಲೋಡುಗಟ್ಟಲೆ ತಲುಪುತ್ತಿವೆ. ೩೦ರ ಶನಿವಾರದಂದು ಕಾರ್ಯಕ್ರಮದ ೨ನೇ ಭಾಗದಲ್ಲಿ ಇನ್ನೆಷ್ಟು ಅಸಹ್ಯ ಎಮ್ಮೆಮ್ಮೆಸ್ ತುಣುಕುಗಳನ್ನು ಪ್ರಸಾರ ಮಾಡಲು ಸಿದ್ದವಿದ್ದೀರೋ ಗೊತ್ತಿಲ್ಲ. ದಯವಿಟ್ಟು ಈ ೨ನೇ ಕಂತನ್ನು ಪ್ರಸಾರಿಸದಿರಿ. ತಮ್ಮ ಕಾರ್ಯಕ್ರಮದ ವಿಡಿಯೋ ಅನ್ನು ಗೆಳೆಯರನೇಕರು ಮೊಬೈಲಿನಲ್ಲಿ ಶೂಟ್ ಮಾಡಿಟ್ಟುಕೊಂಡಿದ್ದಾರೆ. ಐಬಿಎಫ್ ನಿರ್ಬಂಧಿಸಿರುವ ಅಷ್ಟನ್ನೂ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ಉಲ್ಲಂಘಿಸಿದ್ದೀರಿ, ಅದಕ್ಕೆ ಸಾಕ್ಷಿಯೂ ಇದೆ. ಯಾವಾಗ ಬೇಕಾದರೂ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್‌ನಿಂದ ತಮ್ಮ ಕಛೇರಿಗೆ ನೊಟೀಸ್ ಬರಬಹುದು.

ಪತ್ರಕರ್ತನೊಬ್ಬನಿಗೆ ಜನಪರವಾದ, ಜನೋಪಯೋಗಿ ಸುದ್ದಿಗಳನ್ನಷ್ಟೇ ಜನರಿಗೆ ತಲುಪಿಸುವ ಉತ್ಸಾಹವಿರಬೇಕೇ ಹೊರತು ಜನ ನೋಡುತ್ತಾರೆ ಎಂಬ ಧಾವಂತದಲ್ಲಿ ಸೆಕ್ಸ್‌ಬುಕ್ಕಿನ ರೇಂಜಿನ ಕಾರ್ಯಕ್ರಮಗಳನ್ನು ಬ್ಲೂಫಿಲ್ಮುಗಳನ್ನೂ, ಅಶ್ಲೀಲ ಎಮ್ಮೆಮ್ಮೆಸ್ಸುಗಳನ್ನೂ ಪ್ರಸಾರ ಮಾಡುವ ತಮ್ಮ ಕೊಳಕು ಅಭಿರುಚಿಯನ್ನು ಪ್ರದರ್ಶಿಸುವುದಲ್ಲ. ಏಕೆಂದರೆ ನೋಡುವ ಮಾನವಂತರು ವರದಿಗಾರನನ್ನು ವಿಮರ್ಶಿಸುವುದಕ್ಕಿಂತ ಹೆಚ್ಚಾಗಿ ಇಂಥದ್ದನ್ನ ಪ್ರಸಾರ ಮಾಡೋಕೆ ಅನುಮತಿ ಕೊಟ್ಟ ಎಡಿಟರ್ ಏನು ದನಾ ಮೇಯಿಸ್ತಾ ಇದ್ದನಾ ಅಂತ ಮುಲಾಜಿಲ್ಲದೇ ಬೈದುಬಿಡುತ್ತಾರೆ. ಇದಕ್ಕಾದರೂ ತಮ್ಮ ಅಭಿರುಚಿ ಉಬ್ಬುತಗ್ಗುಗಳ ಆಚೀಚೆಗೆ ವಿಸ್ತರಿಸಲೆಂಬ ಆಶಯ ಟಿವಿ ನೋಡುಗರದ್ದು. ಅರ್ಥ ಮಾಡಿಕೊಳ್ಳುತ್ತೀರೆಂಬ ನಂಬುಗೆಯೊಂದಿಗೆ.

ಪ್ರೀತಿಯಿಂದ

-ಟಿ.ಕೆ. ದಯಾನಂದ

1 comment:

  1. javabdaari hottavare heege madudre enu anno alochanege nookuttadhe,,,,,,,,,

    ReplyDelete