Monday 30 July 2012

ಒಂದು ಬೊಗಸೆ ಗಾಳಿ..

ಬೇಡವಾಗಿತ್ತು ಗೆಳೆಯ, ಬದುಕುವ ಆಸೆ ಪೊರೆಯುವ
ಯಾವ ಹಕ್ಕನ್ನೂ ಇನ್ನೂ ನಮಗೆ ಕೊಡಲಾಗಿಲ್ಲ,
ಆದರೂ ಆಸೆ ಪಡುವುದು ನಮ್ಮಿಂದೇಕೆ ನಿಲ್ಲುತ್ತಿಲ್ಲ?
ನಾವು ಪ್ರಶ್ನೆ ಕೇಳಲು ಹುಟ್ಟಿಲ್ಲ ಗೆಳೆಯ..
ಯಾರದ್ದೋ ಖುಷಿಗೆ ದೇಹ ತೇಯಲೆಂದು ಹುಟ್ಟಿದವರು.

ಬೇಡವಾಗಿತ್ತು ಗೆಳೆಯ, ದುಡಿದು ತಿನ್ನುವ ಉಮ್ಮೇದಿ ನಮಗೆ,
ನೆಲ್ಲೂರಿನ ಹೊಲಗಳಲ್ಲಿ 30 ರುಪಾಯಿಗೆ ಕೂಲಿಗೆ
ನಮ್ಮ ಬದುಕನ್ನು ಅಡಮಾನ ಇರಿಸಿಕೊಳ್ಳಲಾಗಿದೆ..
ಅವರ ಒತ್ತೆಯಾಳಾಗಲೆಂದೇ ನೆಲಕ್ಕೆ ಬಿದ್ದವರು ನಾವು.

ಬೇಡವಾಗಿತ್ತು ಗೆಳೆಯ, ಊರುಬಿಟ್ಟು ಕೂಲಿಗೆ ನಡೆಯುವ ಸಾಹಸ
ಕಣ್ಣುಗಳು ಇರಬೇಕಿದ್ದ ಜಾಗದಲ್ಲಿ ಕೊಡಲಿ ಹೊತ್ತವರ ನಡುವೆ
ನಮ್ಮ ಅನ್ನ ಹುಡುಕುವ ಸಾಹಸಕ್ಕೆ ನಗೆಪಾಟಲಿನ ಉತ್ತರ,
ನಮ್ಮ ಚರ್ಮಗಳು ಅವರ ಮೆಟ್ಟುಗಳಾಗಿ ಯಾವ ಕಾಲವೋ ಆಗಿದೆ.

ಬೇಡವಾಗಿತ್ತು ಗೆಳೆಯ, ನಮಗೆ ಉಸಿರಾಡುವ ಉಸಾಬರಿ,
ಅಸಲಿಗೆ ಆ ಹಕ್ಕನ್ನ ನಮಗೆ ಕೊಟ್ಟಿದ್ದಾದರೂ ಯಾವಾಗ?
ಉಸಿರ ಗೂಡಿಗೆ ಒಂದು ಬೊಗಸೆ ಗಾಳಿಯಷ್ಟೇ ಬೇಕಿತ್ತು..
ನಮ್ಮ ತಿತ್ತಿಯನ್ನೇ ಕಿತ್ತು ತಿಂದವರ ಬಳಿಗೆ ಬೊಗಸೆಗಾಳಿಗೆ ತಾವೆಲ್ಲಿ?

ಇಡು ಆ ಬಿದಿರುಕೋಲುಗಳ ಮಲದಗುಂಡಿಯ ಪಕ್ಕಕ್ಕೆ,
ಅಗ್ಗದ್ದೊಂದು ತುಂಡು ಬೀಡಿಯನ್ನಾದರೂ ಸೇದೋಣ,
ಒಳಗಿರುವುದು ಇಬ್ಬರ ಜೀವವನ್ನೂ ಕೊಯ್ಯುವ ಗಾಳಿ,
ಮೊದಲು ನನ್ನದು, ಆಮೇಲೆ ನಿನ್ನದು.. ಇಳಿಯಲಿ ದೇಹಗಳು.

ತಲೆಯೆತ್ತಬೇಡ ಗುಂಡಿಯೊಳಗಿಂದ, ಬೂಟುಗಾಲುಗಳಿವೆ ಮೇಲೆ,
ಅಂಗೈಯನ್ನೂ ಹೊರಚಾಚಬೇಡ, ಹೊಸಕುತ್ತವೆ ಬೂಟುಗಳು..
ಇಗೋ ಗುಂಡಿಯೊಳಗಿನ ವಿಷದಗಾಳಿ, ನೀನು ಕುಡಿದಾದ ಮೇಲೆ
ಒಂದು ಬೊಗಸೆ ಗಾಳಿಯನ್ನು ನನ್ನ ಗಂಟಲಿಗೂ ಇಷ್ಟು ಸುರಿದುಬಿಡು.

ಹುಬ್ಬಳ್ಳಿ ಮಲದಗುಂಡಿ ಸಾವುಗಳ ಬಗ್ಗೆ ಸಪಾಯಿಕರ್ಮಚಾರಿ ಕಾವಲುಸಮಿತಿಯ ಸತ್ಯಶೋಧನಾ ವರದಿ.

ಹುಬ್ಬಳ್ಳಿ ನಗರದ ಚಾಣಕ್ಯಪುರಿ ರಸ್ತೆಯ ಮ್ಯಾನ್ಹೋಲ್ ವಿಷಾನಿಲ ಸೇವನೆಯಿಂದ ಮೃತಪಟ್ಟ 
ಇಬ್ಬರ ಸಾವಿನ ಕುರಿತ ಸಪಾಯಿಕರ್ಮಚಾರಿ ಕಾವಲುಸಮಿತಿಯ ಸತ್ಯಶೋಧನಾ ವರದಿ.

ಜುಲೈ 2012ನೇ ತಿಂಗಳ 22ನೇ ತಾರೀಖಿನ ಭಾನುವಾರದಂದು ಹುಬ್ಬಳ್ಳಿ ನಗರದ ಚಾಣಕ್ಯಪುರಿ ರಸ್ತೆಯ ಶ್ರೀ ಮೌನೇಶರ್ವರ ದೇವಸ್ಥಾನದ ಬಳಿಯ ಮ್ಯಾನ್ ಹೋಲ್ ಒಳಗೆ ಸ್ವಚ್ಛತೆಗೆ ಇಳಿದ ಇಬ್ಬರು ಯುವಕರು ಮೃತಪಟ್ಟ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮದ ನಿವಾಸಿಗಳಾದ ಸಂತೋಷ್ ಮತ್ತು ರಮೇಶ್ ಎಂಬ ಸಹೋದರರು ಸ್ಥಳದಲ್ಲೇ ವಿಷಾನಿಲ ಸೇವನೆಯಿಂದ ಮೃತಪಟ್ಟರೆ, ಅವರೊಡನೆ ಕೆಲಸ ನಿರ್ವಹಿಸುತ್ತಿದ್ದಅದೇ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಾರ್ಮಿಕ ಶಿವು ಭದ್ರಪ್ಪ ರಾಠೋಡ್ ಮತ್ತು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೋಕಿನ ಎಲ್ಲಾರಟ್ಟಿ ಗ್ರಾಮದ ನಿವಾಸಿ ಬಸವರಾಜ ಹೊನ್ನಗೋಳ ಎಂಬ ಮತ್ತೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡಿದ್ದಾರೆ. ಮುಂಬೈನ ಈಗಲ್ ಕನ್ಸ್ಟ್ರಕ್ಷನ್ ಕಂಪನಿಯು ಗುತ್ತಿಗೆಗೆ ಪಡೆದಿರುವ ಉತ್ತರ ಕರ್ನಾಟಕ ನಗರ ಮೂಲಸೌಕರ್ಯ ಯೋಜನೆಯಡಿಯಲ್ಲಿ ಮಲಿನ ನೀರು ಸಾಗಾಟ ಜಾಲಕ್ಕೆ ಸಂಬಂಧಿಸಿದಂತೆ ನಿರ್ಮಿಸಲಾಗಿರುವ ಮ್ಯಾನ್ಹೋಲ್ ಸ್ವಚ್ಛತೆಯ ವೇಳೆ ಈ ದಿನಗೂಲಿ ಕಾರ್ಮಿಕರ ಘೋರಸಾವಿನ ದುರಂತ ಸಂಭವಿಸಿದೆ. ಇನ್ನೂ ಪಾಲಿಕೆಗೆ ಹಸ್ತಾಂತರಿಸದ ಎಂಟು ತಿಂಗಳ ಹಿಂದೆಯಷ್ಟೇ ರಸ್ತೆ ಮಧ್ಯದಲ್ಲಿ ನಿಮರ್ಿಸಿದ ಒಳ ಚರಂಡಿಯನ್ನು ಸ್ವಚ್ಛಗೊಳಿಸಲು ಈ ಕಾರ್ಮಿಕರು ಮ್ಯಾನ್ ಹೋಲ್ ಒಳಗೆ ಇಳಿದಿದ್ದರು. ಆರಂಭದಲ್ಲಿ ಶಿವು ಭದ್ರಪ್ಪ ರಾಠೋಡ ಎಂಬ ಅಪ್ರಾಪ್ರ ವಯಸ್ಸಿನ ಕಾರ್ಮಿಕನು ಇಳಿಯಲೆತ್ನಿಸಿ ಮೇಲೆ ಬಂದು ಗುಂಡಿಯ ಪಕ್ಕದಲ್ಲೇ ಚೇತರಿಸಿಕೊಳ್ಳುತ್ತಿದ್ದಾಗ, ಅದೇ ಗುಂಡಿಯೊಳಗೆ ರಮೇಶ ಇಳಿದು ವಿಷಾನಿಲ ಸೇವನೆಯಿಂದ ಅಸ್ವಸ್ಥಗೊಂಡು ಮ್ಯಾನ್ ಹೋಲ್ ಒಳಗೇ ಕುಸಿದು ಬಿದ್ದಾಗ ಅವನನ್ನು ರಕ್ಷಿಸಲು ಆತನ ಅಣ್ಣ ಸಂತೋಷ ಇಳಿದಿದ್ದಾನೆ, ಆತನೂ ವಿಷದಗಾಳಿ ಸೇವಿಸಿ ಗುಂಡಿಯೊಳಗೇ ಮೃತಪಟ್ಟಿದಾನೆ, ಇವರಿಬ್ಬರನ್ನೂ ಕಾಪಾಡಲು ಒಳಗಿಳಿಯಲು ಯತ್ನಿಸಿದ ಬಸವರಾಜನೂ ಅಸ್ವಸ್ಥಗೊಂಡಾಗ ಸಾರ್ವಜನಿಕರು ಮತ್ತು ಪೋಲೀಸರು ಆತನನ್ನು ಗುಂಡಿಯಿಂದ ಹೊರಗೆಳೆದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಾಧ್ಯಮಗಳ ಮೂಲಕ ಈ ವಿಷಯ ತಿಳಿದ ಸಪಾಯಿ ಕರ್ಮಚಾರಿಗಳ ಕಾವಲುಪಡೆಯ ವತಿಯಿಂದ ಸಂಶೋಧಕ ಮತ್ತು ಪತ್ರಕರ್ತ ಟಿ.ಕೆ. ದಯಾನಂದ, ಹಾಗೂ ಸಾಮಾಜಿಕ ಕಾರ್ಯಕರ್ತ ಓಬಳೇಶ್ ಅವರ ದ್ವಿಸದಸ್ಯ ಸತ್ಯಶೋಧನಾ ಸಮಿತಿಯನ್ನು ರಚಿಸಲಾಯಿತು. ಈ ಇಬ್ಬರು ಸದಸ್ಯರ ತಂಡವು 2012ನೇ ಜುಲೈ 26ನೇ ತಾರೀಖಿನಂದು ಮ್ಯಾನ್ಹೋಲ್ ಒಳಗಿಳಿದು ಮೃತಪಟ್ಟ ರಮೇಶ್ ಮತ್ತು ಸಂತೋಷ್ ಅವರ ಹುಟ್ಟೂರಾದ ಗದಗ ಜಿಲ್ಲೆಯ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮಕ್ಕೆ ಭೇಟಿ ಕೊಟ್ಟು, ಸಂತ್ರಸ್ತ ಕುಟುಂಬದವರೊಡನೆ ಮಾತನಾಡಿ, ವಿಡಿಯೋ ಮತ್ತು ಪೋಟೋ ದಾಖಲಾತಿಗಳನ್ನು ಪಡೆದು, ಆ ಮೂಲಕ ಕಂಡುಕೊಂಡ ಸತ್ಯಾಂಶಗಳನ್ನು ಇಲ್ಲಿ ಮಂಡಿಸಲಾಗಿದೆ.

ಸತ್ಯಶೋಧನ ಸಮಿತಿಯೊಂದಿಗೆ ಘಟನೆಗೆ ಸಂಬಂಧಿಸಿದ ವಿಷಯವನ್ನು ಹಂಚಿಕೊಂಡವರು 

1)ದೇವಕ್ಕ ಯಮುನಪ್ಪ - ಮೃತ ಸಂತೋಷ್ ಮತ್ತು ರಮೇಶರ ತಾಯಿ, ವಯಸ್ಸು ಸುಮಾರು 55 ವರ್ಷಗಳು

2)ಫಕೀರಪ್ಪ ಬೀರಪ್ಪ ಲಮಾಣಿ - ಮೃತ ಸಂತೋಷ್ ಮತ್ತು ರಮೇಶರ ಚಿಕ್ಕಪ್ಪ, ವಯಸ್ಸು ಸುಮಾರು 45 ವರ್ಷಗಳು

3)ಶಿವು ಭದ್ರಪ್ಪ ರಾಠೋಡ್ - ನೆಲ್ಲೂರು ಗ್ರಾಮವಾಸಿ, ಹುಬ್ಬಳ್ಳಿಯ ಯುಜಿಡಿ ಸಫಾಯಿ ಕರ್ಮಚಾರಿ ಮತ್ತು ಘಟನೆಯ ಪ್ರತ್ಯಕ್ಷಸಾಕ್ಷಿ ವಯಸ್ಸು 16 ವರ್ಷಗಳು.

4)ಯಮುನವ್ವ - ನೆಲ್ಲೂರು ಗ್ರಾಮ ವಾಸಿ ಮತ್ತು ಹುಬ್ಬಳ್ಳಿಯ ಯುಜಿಡಿ ಸಫಾಯಿ ಕರ್ಮಚಾರಿ, ವಯಸ್ಸು ಸುಮಾರು 38 ವರ್ಷಗಳು

ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮದ ಸಮಕಾಲೀನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ :

ನೆಲ್ಲೂರು ಗ್ರಾಮವು ಗದಗ ಜಿಲ್ಲೆಯ ರೋಣ ತಾಲ್ಲೋಕು ವ್ಯಾಪ್ತಿಗೆ ಬರುವ ಗ್ರಾಮವಾಗಿದ್ದು ಉತ್ತರ ಕರ್ನಾಟಕದ ಎಲ್ಲ ಹಿಂದುಳಿದ ಗ್ರಾಮಗಳಂತೆಯೇ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮವಾಗಿದೆ. ಈ ನೆಲ್ಲೂರು ಗ್ರಾಮದಲ್ಲಿ ನೆಲೆಸಿರುವ ಪರಿಶಿಷ್ಟಜಾತಿ ಸಮುದಾಯಕ್ಕೆ ಸೇರಿರುವ 60 ಲಂಬಾಣಿ ಕುಟುಂಬಗಳು ನೆಲೆಸಿದ್ದು 450ಕ್ಕೂ ಹೆಚ್ಚು ಜನಸಂಖ್ಯೆ ಈ ಸಮುದಾಯಕ್ಕಿದೆ. 60 ಲಂಬಾಣಿ ಕುಟುಂಬಗಳಲ್ಲಿ 4 ಮಂದಿಗೆ ಮಾತ್ರ ಒಂದೆರಡು ಎಕರೆಯಷ್ಟು ಸ್ವಂತ ಭೂಮಿಯಿದ್ದು ಉಳಿಕೆ ಮಂದಿ ಗ್ರಾಮದ ಭೂಹಿಡುವಳಿದಾರರ ಹೊಲಗದ್ದೆಗಳಲ್ಲಿ ಕೃಷಿಕೂಲಿ ಕಾಮರ್ಿಕರಾಗಿ ದಿನವೊಂದಕ್ಕೆ 30-40 ರೂಪಾಯಿಗಳಿಗೆ ದುಡಿಯುತ್ತಿದ್ದಾರೆ. ಶಿಕ್ಷಣದ ಸೋಂಕೇ ಇಲ್ಲದ ಈ ಲಂಬಾಣಿ ಕುಟುಂಬಗಳಲ್ಲಿ ಒಂದಿಬ್ಬರು ಯುವಕರು ಪಿಯುಸಿವರೆಗೆ ಶಿಕ್ಷಣ ಪಡೆದಿರುವುದನ್ನು ಬಿಟ್ಟರೆ ಮಿಕ್ಕುಳಿದವರು ಇವತ್ತಿಗೂ ಅನಕ್ಷರಸ್ಥರು. ಗ್ರಾಮದಲ್ಲಿ ಅಂಗನವಾಡಿ, ರೇಷನ್ ಡಿಪೋ, ಆರೋಗ್ಯಕೇಂದ್ರದಂತಹ ಯಾವ ಸೌಲಭ್ಯವೂ ಇಲ್ಲ. 2 ತಿಂಗಳಿಗೊಮ್ಮೆ ನೆಲ್ಲೂರು ಗ್ರಾಮಕ್ಕೆ ಭೇಟಿ ಕೊಟ್ಟು ಮನೆಮನೆಗೂ ತೆರಳಿ ಚಿಕಿತ್ಸೆ ನೀಡುವುದು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳಲ್ಲಿ ಒಂದು. ಆದರೆ ಆರೋಗ್ಯ ಸಹಾಯಕಿಯು ಅಪಿತಪ್ಪಿಯೂ ಈ ಪರಿಶಿಷ್ಟಪಂಗಡಕ್ಕೆ ಸೇರಿದ ಲಂಬಾಣಿತಾಂಡದೊಳಕ್ಕೆ ಹೆಜ್ಜೆಯಿಡುವುದಿಲ್ಲ. ಗ್ರಾಮದ ಮೇಲ್ಜಾತಿ ಮಂದಿಯ ಮನೆಯ ಬಳಿ ಕುಳಿತು ಎಲ್ಲರನ್ನೂ ತನ್ನ ಬಳಿಗೆ ಕರೆಯಿಸಿಕೊಂಡು ಆರೋಗ್ಯ ವಿಚಾರಿಸುವುದು ಆರೋಗ್ಯ ಸಹಾಯಕಿಯ ಕಾರ್ಯವೈಖರಿ. ಗ್ರಾಮದ ಯಾವ ಭಾಗದಲ್ಲಿಯೂ ಸಮರ್ಪಕ ರಸ್ತೆಯಾಗಲೀ, ನೀರು ಹರಿದುಹೋಗಲು ಚರಂಡಿ ವ್ಯವಸ್ಥೆಯೆಂಬುದು ಇಲ್ಲವೇ ಇಲ್ಲ.

ಲಂಬಾಣಿ ತಾಂಡದ ಬಹುತೇಕ ಯುವಕರು ಮತ್ತು ಅಪ್ರಾಪ್ತರು ವಯಸ್ಸಿಗೆ ಬರುತ್ತಿದ್ದಂತೆಯೇ ಕೂಲಿಕೆಲಸ ಹುಡುಕುತ್ತ ಊರೂಗಿಗೆ ಗುಳೆ ಹೋಗುವುದು ಸವರ್ೇ ಸಾಮಾನ್ಯ ಸಂಗತಿ. ಹಾಗಾಗಿ ಗಾರೆಕೆಲಸ, ಮ್ಯಾನ್ಹೋಲ್ ಸ್ವಚ್ಛತೆ, ಕಾಂಕ್ರೀಟ್ ಕೆಲಸಗಳಿಗೆಂದು ದೂರದ ಮಂಗಳೂರು, ಬೆಂಗಳೂರು ಮತ್ತು ಕರಾವಳಿಯತ್ತ ಕೆಲಸ ಹುಡುಕುತ್ತ ಗುಳೆಯೆದ್ದು ಹೋದ ಯುವಕರನ್ನು ಹೊರತುಪಡಿಸಿ ಬರಿಯ ಮಕ್ಕಳು ಮತ್ತು ವೃದ್ಧರು ಮಾತ್ರ ನೆಲ್ಲೂರು ಲಂಬಾಣಿ ತಾಂಡಾದೊಳಗೆ ಕಾಣಸಿಗುತ್ತಾರೆ. 

ದೇವಕ್ಕ ಯಮುನಪ್ಪ - ಮೃತ ಸಂತೋಷ್ ಮತ್ತು ರಮೇಶರ ತಾಯಿ, ವಯಸ್ಸು ಸುಮಾರು 55 ವರ್ಷಗಳು

ಹುಬ್ಬಳ್ಳಿಯಲ್ಲಿ ಸುರಕ್ಷಾ ಸಾಧನಗಳಿಲ್ಲದೆ ಮ್ಯಾನ್ ಹೋಲ್ ಒಳಗಿಳಿದು ಮೃತಪಟ್ಟ ಸಂತೋಷ್ ಮತ್ತು ರಮೇಶರ ತಾಯಿ ದೇವಕ್ಕ ಯಮುನಪ್ಪನವರು ಕಳೆದ ಒಂದು ವರ್ಷದಿಂದ ಅವರ ಇಬ್ಬರೂ ಮಕ್ಕಳು ಹುಬ್ಬಳ್ಳಿಯಲ್ಲಿ ಒಳಚರಂಡಿ ವಿಬಾಗದಲ್ಲಿ ದಿನಗೂಲಿ ಕಾಮರ್ಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಶ್ರೀಕಾಂತ್ ಅನ್ನುವ ಮೇಸ್ತ್ರಿಯೊಬ್ಬರಿದ್ದಾರೆ ಎಂದು ಮೃತಪಟ್ಟ ಮಕ್ಕಳು ಆಗಾಗ್ಗೆ ಹೇಳುತ್ತಿದ್ದರು, ನಮ್ಮ ನೆಲ್ಲೂರು ಲಂಬಾಣಿ ತಾಂಡದಿಂದಲೇ ಸುಮಾರು 30 ಮಂದಿಯು ಹುಬ್ಬಳ್ಳಿಯಲ್ಲಿ ಅದೇ ಒಳಚರಂಡಿ ವಿಬಾಗದಲ್ಲಿ ದಿನಗೂಲಿ ಕಾಮರ್ಿಕರಾಗಿ ಕೆಲಸ ಮಾಡುತ್ತಿದ್ದಾರೆ, ಅದರಲ್ಲಿ ಶಿವು ಭದ್ರಪ್ಪ ರಾಠೋಡ್, ಕುಮ್ಯಾ ಹಾಗೂ ಬಾಲು ಎಂಬ ಅಪ್ರಾಪ್ತ ಬಾಲಕರೂ ಇದ್ದಾರೆ, ಎಲ್ಲರೂ ಹುಬ್ಬಳ್ಳಿಯ ಬೆಳಗಿಹಾಳ ಮತ್ತು ಬೇರಿಕೊಪ್ಪ ಪ್ರದೇಶದ ಪಕ್ಕದ ಏರ್ಟೆಲ್ ಟವರ್ ಬಳಿ ಶೆಡ್ ಹಾಕಿಕೊಂಡು ಉಳಿದುಕೊಂಡಿದ್ದಾರೆ, ಗಂಡಸರಿಗೆ ದಿನಕ್ಕೆ 250 ಮತ್ತು ಹೆಂಗಸರಿಗೆ 150 ರೂ ಕೂಲಿ ಕೊಡುತ್ತಾರೆ, ಪ್ರತೀ ವಾರಕ್ಕೊಮ್ಮೆ ನಗದು ರೂಪದಲ್ಲಿ ಸಂಬಳ ಕೊಡುವುದಾಗಿಯೂ, ಅದಕ್ಕೆ ರಸೀತಿಯನ್ನೇನೂ ಕೊಡುತ್ತಿರಲಿಲ್ಲವೆಂದು ಮೃತಪಟ್ಟ ಮಕ್ಕಳು ತಮ್ಮಲ್ಲಿ ಹೇಳುತ್ತಿದ್ದರು ಎಂಬುದನ್ನು ಬಿಟ್ಟರೆ ಮಕ್ಕಳ ಕೆಲಸದ ಬಗ್ಗೆ ನನಗೆ ಹೆಚ್ಚಿನ ವಿಷಯಗಳೇನೂ ತಿಳಿದಿಲ್ಲ ಎಂದು ದೇವಕ್ಕ ತಮ್ಮಲ್ಲಿದ್ದ ಮಾಹಿತಿಯನ್ನು ನಮ್ಮೊಡನೆ ಹಂಚಿಕೊಂಡರು. 

1) ಯಮುನವ್ವ - ನೆಲ್ಲೂರು ವಾಸಿ ಮತ್ತು ಯುಜಿಡಿ ಸಫಾಯಿ ಕರ್ಮಚಾರಿ, ವಯಸ್ಸು ಸುಮಾರು 38 ವರ್ಷಗಳು

ನಾವು ಒಟ್ಟು 30 ಮಂದಿ ನೆಲ್ಲೂರು ಲಂಬಾಣಿತಾಂಡದಿಂದ ಹುಬ್ಬಳ್ಳಿ ಒಳಚರಂಡಿ ವಿಬಾಗದಲ್ಲಿ ಸಫಾಯಿ ಕರ್ಮಚಾರಿ ದಿನಗೂಲಿ ಕೆಲಸವನ್ನು ಮಾಡುತ್ತಿದ್ದೇವೆ, ನಮ್ಮನ್ನು ಕೆಲಸಕ್ಕೆ ತೆಗೆದುಕೊಂಡ ಮಾಲೀಕರಾಗಲೀ ಕಂಪೆನಿಯಾಗಲೀ ನಮಗೆ ತಿಳಿದಿಲ್ಲ, ಮೇಸ್ತ್ರಿಯಾಗಿದ್ದ ಶ್ರೀಕಾಂತ್ ಮತ್ತು ಚೌಗಲೆ, ಪಾಂಡೆ ಎನ್ನುವರು ಮಾತ್ರ ನಮಗೆ ಗೊತ್ತು, ಅವರು ಆಗಾಗ್ಗೆ ಕೆಲಸದ ಜಾಗಕ್ಕೆ ಬರುತ್ತಿದ್ದರು, ಚರಂಡಿ ಮತ್ತು ಮ್ಯಾನ್ಹೋಲ್ ಸ್ವಚ್ಛಗೊಳಿಸುವುದು ನಮಗೆ ವಹಿಸಿದ ಕೆಲಸವಾಗಿತ್ತು. ಕೆಲಸ ಮಾಡುವುದಕ್ಕೆಂದು ಯಾವುದೇ ಸಮವಸ್ತ್ರವಾಗಲೀ, ಸುರಕ್ಷಾ ಸಾಧನಗಳನ್ನಾಗಲೀ, ಕೈಗವಸು, ಬೂಟುಗಳನ್ನು ಗುತ್ತಿಗೆದಾರರು ನಮಗೆ ಕೊಟ್ಟಿಲ್ಲ, ಬರಿಗೈಯಲ್ಲೇ ಚರಂಡಿ, ಒಳಚರಂಡಿ ಶುಚಿಗೊಳಿಸುವ ಕೆಲಸವನ್ನು ನಮ್ಮಿಂದ ಮಾಡಿಸಲಾಗುತ್ತಿತ್ತು, ಅನೈರ್ಮಲ್ಯಕರ ವಾತಾವರಣದಲ್ಲಿ ವಾಸನೆ ಬಂದರೂ ಹೇಸಿಗೆಯಾದರೂ ವಾರದ ದಿನಗೂಲಿಗಾಗಿ ನಾವು ಯಾವ ಸುರಕ್ಷಾಸಾಧನವೂ ಇಲ್ಲದೆ ಆ ಕೆಲಸವನ್ನು ಮಾಡಲೇ ಬೇಕಿತ್ತು ಎಂದು ಯಮುನವ್ವ ತಮ್ಮ ಕೆಲಸದ ಅನುಭವವನ್ನು ಹಂಚಿಕೊಂಡರು.

2) ಶಿವು ಭದ್ರಪ್ಪ ರಾಠೋಡ್ - ನೆಲ್ಲೂರು ಗ್ರಾಮವಾಸಿ, ಹುಬ್ಬಳ್ಳಿಯ ಯುಜಿಡಿ ಸಫಾಯಿ ಕರ್ಮಚಾರಿ ಮತ್ತು ಘಟನೆಯ ಪ್ರತ್ಯಕ್ಷಸಾಕ್ಷಿವಯಸ್ಸು 16 ವರ್ಷಗಳು.

ಆವತ್ತು 22ನೇ ತಾರೀಖಿನ ಭಾನುವಾರ ಬೆಳಿಗ್ಗೆಯಿಂದ ಗಟಾರ ಸ್ವಚ್ಛ ಮಾಡಲಿಕ್ಕೆ ಮೇಸ್ತ್ರಿ ಶ್ರೀಕಾಂತ್ ಹೇಳಿದ್ದರು. ಅದರಂತೆ ಕೆಲಸ ಮಾಡ್ತ ಇದ್ದೆವು. ಬೇರೆ ಪ್ರದೇಶಗಳ ಮ್ಯಾನ್ ಹೋಲ್ ಸ್ವಚ್ಛತೆ ಮುಗಿಸಿ ಚಾಣಕ್ಯಪುರಿ ರಸ್ತೆ ಮ್ಯಾನ್ ಹೋಲ್ ಸ್ವಚ್ಛತೆಗೆ ಮುಂದಾದಾಗ ಮೊದಲು ಅದರ ಮುಚ್ಚಳ ತೆರೆದು ನಾನೇ ಇಳಿದೆ. ಒಳಗೆ ಹೋಗುತ್ತಿದ್ದಂತೆ ಉಸಿರುಕಟ್ಟಿದಂತೆ ಅನುಭವ ಆಗಿ ಪ್ರಜ್ಞೆ ತಪ್ಪುವಂತಾಯಿತು, ಕೂಗಿಕೊಂಡೆ, ತಕ್ಷಣವೇ ರಮೇಶ ಮತ್ತು ಸಂತೋಷ ನನ್ನನ್ನು ಮೇಲಕ್ಕೆ ಎಳೆದುಕೊಂಡರು. ಮೇಲಕ್ಕೆ ಬಂದು ಅಲ್ಲೇ ರಸ್ತೆಯಲ್ಲಿ ಮಲಗಿ ಸುಧಾರಿಸಿಕೊಳ್ಳುತ್ತಿದ್ದೆ, ಆಗ ರಮೇಶ ನಾನು ತಮಾಷೆ ಮಾಡುತ್ತಿದ್ದೇನೆ ಎಂದು ಭಾವಿಸಿ ಅವನೇ ಒಳಗೆ ಮ್ಯಾನ್ ಹೋಲ್ ಒಳಗೆ ಇಳಿದವನು ಅಲ್ಲಿಯೇ ಕುಸಿದು ಬಿದ್ದ, ಅವನ ನಂತರ ಸಂತೋಷ, ಅವನ ಹಿಂದೆ ಬಸವರಾಜ ಮೂವರೂ ಒಬ್ಬರನ್ನೊಬ್ಬರು ಕಾಪಾಡಲು ಗುಂಡಿಯೊಳಗೆ ಇಳಿದವರು ಒಳಗೆ ಒದ್ದಾಡತೊಡಗಿದ್ದರು, ನಾನು ಅಲ್ಲಿದ್ದ ಜನರನ್ನು ಕಾಪಾಡಲು ಕೂಗಿಕೊಂಡೆ, ಬಸವರಾಜನನ್ನು ಯಾರೋ ಮೇಲಕ್ಕೆ ಎಳೆದು ಕಾಪಾಡಿದರು. ನನಗೆ ಅಷ್ಟೇ ಗೊತ್ತು, ನಮ್ಮ ಮೇಸ್ತ್ರಿ ಶ್ರೀಕಾಂತ್ ಮತ್ತು ಇನ್ನೊಬ್ಬರು ನನ್ನನ್ನು ಅಲ್ಲಿಂದ ಕರೆದುಕೊಂಡು ಯಾವುದೋ ಒಂದು ಆಫೀಸಿನಲ್ಲಿ ಕೂಡಿ ಹಾಕಿದ್ದರು. ನನ್ನ ಮೊಬೈಲಿನಿಂದ ಅವರಿಗೆ ಕಾಲ್ ಮಾಡಿ ರಮೇಶ, ಸಂತೋಷ ಮತ್ತು ಬಸವರಾಜುಗೆ ಏನಾಯ್ತು ಅಂತ ಕೇಳಿದೆ, ಅದಕ್ಕವರು ಏನೂ ಆಗಿಲ್ಲ ಎಲ್ಲರೂ ಆಸ್ಪತ್ರೆಯಲ್ಲಿದ್ದಾರೆ, ಗ್ಲೂಕೋಸ್ ಹಾಕಿದ್ದಾರೆ, ಚೆನ್ನಾಗಿದ್ದಾರೆ ಅಂತ ಹೇಳಿದರು. ಮಾರನೆಯ ದಿನ ಊರಿನವರ ಜೊತೆಯಲ್ಲಿ ನೆಲ್ಲೂರು ತಾಂಡಕ್ಕೆ ಬಂದಾಗಲೇ ರಮೇಶ ಮತ್ತು ಸಂತೋಷ ಇಬ್ಬರೂ ಸತ್ತಿರುವ ವಿಷಯ ನನಗೆ ಗೊತ್ತಾಗಿದ್ದು.

3) ಫಕೀರಪ್ಪ ಬೀರಪ್ಪ ಲಮಾಣಿ ಮೃತರ ಚಿಕ್ಕಪ್ಪ, ವಯಸ್ಸು ಸುಮಾರು 45 ವರ್ಷಗಳು

ರಮೇಶ ಮತ್ತು ಸಂತೋಷ ಗುಂಡಿಯೊಳಗೆ ಬಿದ್ದು ಸತ್ತಿದ್ದು 22ನೇ ತಾರೀಖಿನ ಮಧ್ಯಾನ್ಹ 2 ಗಂಟೆಗೆ. ಆದರೆ ಹುಬ್ಬಳ್ಳಿ ಮಹಾನಗರಪಾಲಿಕೆಯವರು ಮತ್ತು ಕಂಪನಿಯವರು ನಮಗೆ ವಿಷಯ ತಿಳಿಸಿದ್ದು ರಾತ್ರಿ 8 ಗಂಟೆಗೆ. ಅಲ್ಲಿಯತನಕ ನಮ್ಮ ಮಕ್ಕಳು ಮೃತಪಟ್ಟಿರುವ ವಿಷಯ ನಮಗೆ ತಿಳಿದೇ ಇರಲಿಲ್ಲ. ತಕ್ಷಣವೇ ನಾವು ಮತ್ತು ನಮ್ಮ ಸಂಬಂಧಿಕ ರಾಮು ಲಂಬಾಣಿ ಅನ್ನುವರು ಇಬ್ಬರೂ ಹುಬ್ಬಳ್ಳಿಗೆ ಹೊರಟೆವು. ಕೆ.ಎಂ.ಸಿ ಆಸ್ಪತ್ರೆಯಲ್ಲಿ ರಮೇಶ ಸಂತೋಷರ ಹೆಣವನ್ನು ಪೋಸ್ಟ್ ಮಾರ್ಟಂ ಮಾಡಿ ಇಟ್ಟಿದ್ದರು. ಹೆಣವನ್ನು ನೋಡಲಿಕ್ಕೂ ನಮಗೆ ಅಧಿಕಾರಿಗಳು ಬಿಡಲಿಲ್ಲ. ರಾತ್ರಿಯಿಡೀ ಆಸ್ಪತ್ರೆ ಆವರಣದಲ್ಲೇ ಇದ್ದ ನಮಗೆ ಮಾರನೆಯ ದಿನ ಬೆಳಗ್ಗೆ ಪೋಲೀಸರು ಬಂದ ಮೇಲೆಯೇ ಹೆಣ ತೋರಿಸಿದ್ದು. ಆವ ಯಾರೆಲ್ಲ ಇದ್ದರು, ಅವರೆಲ್ಲ ಯಾವ ಅಧಿಕಾರಿಗಳು ಅನ್ನುವುದು ನಮಗೂ ತಿಳಿದಿರಲಿಲ್ಲ. ಕಂಪನಿಯ ಕಡೆಯವರೆಂದು ಯಾರೋ ಒಬ್ಬರು ಒಂದೊಂದು ಜೀವಕ್ಕೆ ಎರಡೂವರೆ ಲಕ್ಷದಂತೆ 5 ಲಕ್ಷ ದುಡ್ಡು ಕೊಟ್ಟು ಮಣ್ಣು ಮಾಡಲು 10,500 ರೂಗಳನ್ನು ಕೊಟ್ಟರು. ಕೊಟ್ಟವರು ಯಾರು ಅಂತಲೂ ನಮಗೆ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಒಂದು ಆಂಬ್ಯುಲೆನ್ಸ್ ಮಾಡಿ ಎರಡೂ ಹೆಣಗಳನ್ನು ಅದರೊಳಗೆ ತುಂಬಿ ಊರಿಗೆ ತೆಗೆದುಕೊಂಡು ಹೋಗಲು ನಮ್ಮನ್ನು ಬಲವಂತವಾಗಿ ಕಳಿಸಿಬಿಟ್ಟರು. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೆಲ್ಲೂರು ಲಂಬಾಣಿ ತಾಂಡದ 30 ಮಂದಿಯನ್ನೂ ಆವತ್ತೇ ಊರಿಗೆ ಕಳಿಸಿದರು. ಈಗ ಎಲ್ಲರೂ ಇಲ್ಲಿಯೇ ಇದ್ದೇವೆ.

ಸತ್ಯಶೋಧನಾ ಸಮಿತಿಯ ಗಮನಕ್ಕೆ ಬಂದಂಥಹ ಅಂಶಗಳು

1)ಜುಲೈ 22ನೇ ತಾರೀಖಿನ ಭಾನುವಾರದಂದು ಹುಬ್ಬಳ್ಳಿಯಲ್ಲಿ ನಡೆದ ಮಲದಗುಂಡಿಯ ಸಾವಿನ ಪ್ರಕರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ, ಒಳಚರಂಡಿ ನಿಮರ್ಾಣ ಮತ್ತು ನಿರ್ವಹಣೆಯ ಗುತ್ತಿಗೆದಾರರಾದ ಈಗಲ್ ಕನ್ಸ್ ಟ್ರಕ್ಷನ್ ಕಂಪನಿ ಹಾಗೂ ಜಿಲ್ಲಾಡಳಿತದ ಹೊಣೆಗೇಡಿತನ ಮತ್ತು ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕನ್ನಡಿಯಂತಿದೆ. ಒಳಚರಂಡಿ ನಿರ್ಮಾಣ ಮತ್ತು ನಿರ್ವಹಣೆಗೆ ಒಪ್ಪಂದ ಮಾಡಿಕೊಂಡ ಮಹಾನಗರಪಾಲಿಕೆ ಮತ್ತು ಈಗಲ್ ಕನ್ಸ್ಟ್ರಕ್ಷನ್ ಕಂಪನಿಯ ನಡುವೆ ನಡುವೆ ಆಗಿರುವ ಒಪ್ಪಂದದಂತೆ ಈ ಕೆಲಸದಲ್ಲಿ ಬಾಲಕಾರ್ಮಿಕರನ್ನು ಬಳಸುವಂತಿಲ್ಲ, ಆದರೆ ಈ ಒಪ್ಪಂದವನ್ನು ಉಲ್ಲಂಘಿಸಿರುವ ಕಂಪನಿಯ ಅಧಿಕಾರಿಗಳು ಮೃತ ರಮೇಶ್ ಸಂತೋಷ್ ಸೇರಿದಂತೆ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮದ ಶಿವು ಭದ್ರಪ್ಪ ರಾಠೋಡ, ಕುಮ್ಯಾ, ಬಾಲು ಎಂಬ ಅಪ್ರಾಪ್ತ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ.

2)ಒಳಚರಂಡಿ ಸ್ವಚ್ಛತೆಯ ಸಂದರ್ಭದಲ್ಲಿ ಮನುಷ್ಯರನ್ನು ಗುಂಡಿಯೊಳಗೆ ಇಳಿಸುವುದು ಅಕ್ರಮ ಮತ್ತು ಅಪರಾಧವೆಂದು ಕೋರ್ಟ್ ತೀರ್ಪುಗಳು ಇದ್ದಾಗ್ಯೂ ಸಹ, ಸಕ್ಕಿಂಗ್ ಮೆಷೀನ್ ಹೊರತುಪಡಿಸಿ ಈ ಬಗೆಯ ಕೆಲಸವನ್ನು ಮನುಷ್ಯರಿಂದ ಮಾಡಿಸುವುದು ತಪ್ಪೆಂದು 1993ರ ಮಲಹೊರುವ ಪದ್ದತಿ ನಿಷೇಧ ಕಾಯ್ದೆಯು ಹೇಳಿದರೂ ಸಹ ಅದಕ್ಕೆ ಬೆಲೆ ಕೊಡದೆ, ಮನುಷ್ಯರನ್ನು ಮ್ಯಾನ್ ಹೋಲ್ ಒಳಗೆ ಇಳಿಸಿ ಸ್ವಚ್ಛಗೊಳಿಸುವುದನ್ನು ಮುಂದುವರೆಸುವ ಮೂಲಕ ಹುಬ್ಬಳ್ಳಿ ಮಹಾನಗರಪಾಲಿಕೆ ಮತ್ತು ಈಗಲ್ ಕನ್ಸ್ ಟ್ರಕ್ಷನ್ ಕಂಪನಿ ಇಬ್ಬರೂ ಕೋರ್ಟ್ ಆದೇಶ ಹಾಗೂ 1993ರ ಮಲಹೊರುವ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. 

3)ಮ್ಯಾನ್ ಹೋಲ್ ಒಳಗೆ ಮೃತಪಟ್ಟ ರಮೇಶ್ ಮತ್ತು ಸಂತೋಷರ ಸಂಬಂಧಿಕರಿಗೆ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯು 5 ಲಕ್ಷರೂಗಳ ಔಪಚಾರಿಕ ಪರಿಹಾರ ಧನವನ್ನು ನೀಡಿದೆ. ಈ ಪರಿಹಾರ ಧನದ ಕುರಿತಂತೆ ಯಾವುದೇ ಅಧಿಕೃತ ಘೋಷಣೆಯನ್ನಾಗಲೀ, ಹೇಳಿಕೆಯನ್ನಾಗಲೀ ಕಂಪನಿ ಮತ್ತು ಮಹಾನಗರಪಾಲಿಕೆ ನೀಡದಿರುವುದು ಮತ್ತು ಕಾಮರ್ಿಕ ನ್ಯಾಯಾಲಯದಲ್ಲಿ ಪ್ರಕರಣವನ್ನು ತಂದು ನ್ಯಾಯಬದ್ಧ ಪರಿಹಾರ ವಿತರಣೆಗೆ ಮುಂದಾಗದೆ ಇರುವುದು ಪ್ರಕರಣವನ್ನು ಹಣ ಕೊಟ್ಟು ಮುಚ್ಚಿ ಹಾಕುವ ಪ್ರಯತ್ನದಂತೆ ಕಾಣುತ್ತದೆ.

4)ಮ್ಯಾನ್ ಹೋಲ್ ಸ್ವಚ್ಛತೆಯ ಸಂದರ್ಭದಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಮನುಷ್ಯರನ್ನು ಗುಂಡಿಯೊಳಗೆ ಇಳಿಸುವಾಗ ಅಗತ್ಯ ಸುರಕ್ಷಾ ಸಲಕರಣಗಳನ್ನು ಬಳಸಿ ಇಳಿಸುವ ಎಚ್ಚರಿಕೆಯಿಲ್ಲದೆ ನಿರ್ಲಕ್ಷ್ಯ ತೋರಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯ ವಿರುದ್ಧ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು, ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಲ ಹೊರುವ ಪದ್ದತಿ ನಿಷೇಧ ಕಾಯ್ದೆ ಮೂರರ ಕೆಳಗೂ ಮೊಕದ್ದಮೆಗಳನ್ನು ಹೂಡಲೇಬೇಕಿದೆ.

5)ಮೃತರ ಹುಟ್ಟೂರಾದ ಗದಗ ಜಿಲ್ಲೆಯ ರೋಣ ತಾಲ್ಲೋಕಿನ ನೆಲ್ಲೂರು ಗ್ರಾಮವು ಮನುಷ್ಯರು ವಾಸಿಸಲು ಕೂಡ ಯೋಗ್ಯವಾಗಿಲ್ಲದೆ ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿದ್ದು ಭೂ ರಹಿತ ಕೃಷಿ ಕೂಲಿ ಕಾಮರ್ಿಕರೇ ಹೆಚ್ಚಿರುವ ಹಳ್ಳಿಯಾಗಿದೆ. ಅತ್ಯಂತ ತ್ವರಿತವಾಗಿ ಈ ಗ್ರಾಮದ ಬಡ ಲಂಬಾಣಿ ಕುಟುಂಬಗಳಿಗೆ ಭೂಮಿಯೂ ಸೇರಿದಂತೆ ಇನ್ನಿತರೆ ಕಲ್ಯಾಣಾಧರಿತ ಸಕರ್ಾರಿ ಕಾರ್ಯಕ್ರಮಗಳನ್ನು ತಲುಪಿಸಲೇಬೇಕಾದ ತುರ್ತು ಕಂಡುಬಂದಿದೆ.

ಸತ್ಯಶೋಧನ ಸಮಿತಿಯ ಶಿಫಾರಸ್ಸುಗಳು

1)ಮನುಷ್ಯ ಜೀವರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ತೋರಿ ಇಬ್ಬರು ಯುವಕರ ಸಾವಿಗೆ ಕಾರಣರಾದ ಹುಬ್ಬಳ್ಳಿ ಮಹಾನಗರಪಾಲಿಕೆ ಮತ್ತು ಒಳಚರಂಡಿ ನಿರ್ವಹಣೆಯ ಗುತ್ತಿಗೆ ಪಡೆದಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿ ಈರ್ವರ ಮೇಲೂ ಐಪಿಸಿ 304 ಎ ಪ್ರಕಾರ, ದಲಿತ ದೌರ್ಜನ್ಯ ತಡೆ ಕಾಯ್ದೆ, ಮಲಹೊರುವ ಪದ್ದತಿ ನಿಷೇಧ ಕಾಯ್ದೆಯಡಿಯಲ್ಲಿ ಈ ತಕ್ಷಣವೇ ಮೊಕದ್ದಮೆ ದಾಖಲಿಸಿ ಸಂಬಂಧಿಸಿದ ಎರಡೂ ಸಂಸ್ಥೆಗಳ ಅಧಿಕಾರಿಗಳನ್ನು ಬಂಧಿಸಬೇಕು

2)ಒಟ್ಟು ಪ್ರಕರಣವು ವಲಸೆ, ಬಡತನ, ಅಧಿಕಾರಿಗಳ ಬೇಜವಬ್ದಾರಿತನ, ಕಾನೂನುಗಳ ಉಲ್ಲಂಘನೆಯಂತಹ ಸಂಕೀರ್ಣ ವಿಷಯಗಳಿಂದ ಕೂಡಿದ್ದು ಘೋರವಾಗಿ ಕಾನೂನುಗಳನ್ನು ಉಲ್ಲಂಘನೆ ಮಾಡಿರುವ ಪ್ರಕರಣ ಇದಾಗಿರುವುದರಿಂದ ಈ ಕುರಿತು ಶೀಘ್ರವೇ ಒಂದು ತನಿಖೆ ನಡೆಸಲು ಸಿಓಡಿಗೆ ವಹಿಸಬೇಕು

3)ಬಾಲಕಾರ್ಮಿಕ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯ ಪರವಾನಗಿಯನ್ನು ರದ್ದುಗೊಳಿಸಬೇಕು ಮತ್ತು ಇದಕ್ಕೆ ಸಹಕರಿಸಿದ ಮಹಾನಗರಪಾಲಿಕೆಯ ಅಧಿಕಾರಿಗಳನ್ನು ಈ ಕೂಡಲೇ ಸಸ್ಪೆಂಡ್ ಮಾಡಬೇಕು

4) ಅನಧಿಕೃತವಾಗಿ 5 ಲಕ್ಷ ಪರಿಹಾರವನ್ನು ನೀಡಿ ಕೈತಳೆದುಕೊಳ್ಳಲು ಯತ್ನಿಸಿರುವ ಈಗಲ್ ಕನ್ಸ್ ಟ್ರಕ್ಷನ್ ಕಂಪನಿಯು ಮೃತ ರಮೇಶ್ ಮತ್ತು ಸಂತೋಷ್ ಎಳೆಯ ವಯಸ್ಸಿನವರಾಗಿರುವುದರಿಂದ ಕಾಮರ್ಿಕ ನ್ಯಾಯಾಲಯದ ಮೂಲಕ ಅಧಿಕೃತವಾಗಿ ಮತ್ತು ಕಾನೂನುಬದ್ದವಾಗಿ ಮೃತ ದುರ್ದೈವಿಗಳ ಕುಟುಂಬಕ್ಕೆ ತಲಾ 50 ಲಕ್ಷರೂಗಳಂತೆ ಒಂದು ಕೋಟಿ ರೂಗಳ ಪರಿಹಾರ ಧನವನ್ನು ಪಾವತಿಸಬೇಕು. 

- ಟಿ.ಕೆ. ದಯಾನಂದ

- ಓಬಳೇಶ್





ಜನ್ಮಾಪಿ ಋಣಿ

ಒಮ್ಮೊಮ್ಮೆ ಎಡವಲಿಕ್ಕೆಂದೇ ಇಡಲ್ಪಟ್ಟ ಗೋಡೆಗಳನ್ನು
ನಾಜೂಕಾಗಿ ದಾಟಿಕೊಂಡು ಇವಳೆಡೆಗೆ ನಡೆಯುತ್ತೇನೆ.
ಅಂಗಾಲಿಗೆ ತೂರಿಕೊಂಡ ಕಾರೆಮುಳ್ಳುಗಳನ್ನು
ಇವಳು ಸೂಕ್ಷ್ಮವಾಗಿ ತೆಗೆದು ನನ್ನ ನೆತ್ತಿ ನೇವರಿಸುತ್ತಾಳೆ.

ಆ ಬೆರಳುಗಳ ಮೃದು ಚಲನೆಗೆ ನನ್ನ ನೆತ್ತಿಯೊಳಗೆ
ಹೂವುಗಳು ಬಿರಿಯುತ್ತವೆ, ನರವ್ಯೂಹ ಜೀವಂತಗೊಳ್ಳುತ್ತದೆ,
ಇಲ್ಲದಿದ್ದಲ್ಲಿ ಇಷ್ಟೊತ್ತಿಗೆ ಆ ಗೋಡೆಗಳು ನನ್ನನ್ನು ಕೊಲ್ಲುತ್ತಿದ್ದವು.
ಇವಳಿಗೂ, ಇವಳ ಬೆರಳುಗಳಿಗೂ ನಾನು ಜನ್ಮಾಪಿ ಋಣಿ.

ಯಾರದ್ದೋ ವ್ಯೂಹ, ಯಾರದ್ದೋ ನಡೆ, ಫಿಕರ್ ನಹೀ..
ಇವಳ ಪ್ರೇಮ ನನ್ನ ನೆತ್ತಿ ಕಾಯ್ದ ಅಷ್ಟೂ ಜನ್ಮಗಳು..
ನಾನವಳಿಗೆ ಹೆತ್ತ ಕೂಸು, ಅವಳು ತಾಯಲ್ಲದ ತಾಯಿ,
ಅಗೋಚರ ಕಣ್ಣುಗಳ ಬಗ್ಗೆ ಇಲ್ಲಿ ಸಹಿಸಲಾಗದ ಅಸಹ್ಯ.

ಇವಳು ನನ್ನ ಅಂಗೈಯ ಮೇಲೆ ಸಂಪಿಗೆಯ ಬೀಜಗಳನ್ನು ನೆಟ್ಟಿದ್ದಾಳೆ,
ಬೊಗಸೆ ಬಿರಿದು, ಮೂಳೆ ಸೀಳಿಕೊಂಡು ಮರವೊಂದು ಹುಟ್ಟಿದೆ..
ಅಂಗೈಯೊಳಗಿನ ಸಂಪಿಗೆಯ ಮರದ ತುಂಬ ಪ್ರೇಮದ ಘಮಲು..
ಅರೆತೆರೆದ ನನ್ನ ಕಣ್ಣುಗಳ ತುಂಬ ಮನುಷ್ಯತ್ಬದ ಕಡು ಅಮಲು..

ಒಂದು ಮೋಡದ ತುಂಡು

ಯಾರಿಗೂ ಕಾಯದೆ ಅದರಪಾಡಿಗದು ಜಿನುಗಿಕೊಳ್ಳುವ
ಮಳೆಯ ಭಾಷೆಯನ್ನೇ ಮರೆತವನ ರೆಪ್ಪೆಯ ಮೇಲೆ
ಇವಳು ಒಂದು ಮೋಡದ ತುಂಡನ್ನೇ ಕಿತ್ತುತಂದು ಇಟ್ಟಿದ್ದಾಳೆ,
ಚೆಲ್ಲಾಡಿ ಹೋಗುತ್ತಿದೆ ಮಳೆ, ನನ್ಕಕಣ್ಣೊಳಗಿನ ಭೂಮಿಯೊಳಗೆ..

ಅವಳ ಕಡುಗೆಂಪು ಮದರಂಗಿ ಪಾದದ ಕಿರುಬೆರಳ ಎದುರಿಗೆ
ತಲೆ ಕಡಿದುಕೊಂಡ ನನ್ನೊಳಗಿನ ರಾಕ್ಷಸ ಮಂಡಿಯೂರಿದ್ದಾನೆ,
ಮದರಂಗಿ ಚಿತ್ರದೊಡತಿಯ ತಣ್ಣನೆಯ ಕಣ್ಣೆದುರು
ಮುಲಾಜೇ ಇಲ್ಲದೆ ಕೇವಲ ಮನುಷ್ಯನೊಬ್ಬ ಹುಟ್ಟುತ್ತಿದ್ದಾನೆ.

ಜೀವ ಕುಸುಮದ ಬೀಜವನ್ನು ಕೈಯಲ್ಲೇ ಹೊತ್ತ ಇವಳು
ಇಕೋ ನಿನ್ನ ಎದೆ ಹರವು, ಪ್ರೇಮವೃಕ್ಷದ ಬೀಜಗಳನ್ನು,
ಒಂದೊಂದೇ ನೆಡುತ್ತೇನೆ, ರೆಪ್ಪೆಯ ಮೇಲಿಟ್ಟ ಮೋಡ ಬಸುರಾದಾಗ
ಬೊಗಸೆ ತುಂಬ ನಿನ್ನ ಎದೆಕಾಡೊಳಗೆ ನೀರು ತರುತ್ತೇನೆ ಅನ್ನುತ್ತಾಳೆ.

ಮಾಯಾ ಮಿಥ್ಯೆಗಳ ಬೆಣಚುಕಲ್ಲುಗಳ ಮೇಲೆ ಇಲ್ಲಿಯತನಕ ನಡೆದ ನಾನು
ಅವಳು ತರುವ ಬೊಗಸೆನೀರಿಗೆ ಜೀವ ಮುಷ್ಠಿಯಲ್ಲಿಡಿದು
ರೆಪ್ಪೆಯನ್ನೂ ಮಿಟುಕಿಸದೆ ಕುಕ್ಕರಗಾಲಲ್ಲಿ ಕುಳಿತಿದ್ದೇನೆ..
ರೆಪ್ಪೆ ಮಿಟುಕಿಸಿದರೆ ಇಟ್ಟ ಮೋಡದ ತುಂಡು ಒಡೆಯುವ ಭಯ.

ಮದರಂಗಿ ಪಾದದೊಡತಿ ತರುವ ಬೊಗಸೆ ನೀರಿನೊಳಗೆ..
ಅವಳು ಒಂದೇ ದಾರದೊಳಗೆ ಪೋಣಿಸಿಟ್ಟ ನನ್ನ ಮೂರಕ್ಷರದ ಬದುಕು
ಮರಳ ಮೇಲಿಂದ ನದಿಗೆ ಕುಪ್ಪಳಿಸಿದ ಮೀನಿನ ಮರಿಯಂತೆ
ಅದರ ಪಾಡಿಗದು ಅವಳನ್ನೇ ನೋಡುತ್ತ, ನೋಡುತ್ತಲೇ ಇದೆಯಲ್ಲ.

ಮಳೆಯ ಭಾಷೆಯನ್ನು ಜೀವಕುಸುಮದೊಳಗೆ ಅದ್ದಿ, ಮದರಂಗಿ ಕಿರುಬೆರಳ
ಪ್ರೇಮವೃಕ್ಷದ ದಾಹಕ್ಕೆ ರೆಪ್ಪೆಯ ಮೇಲಿಟ್ಟ ಮೋಡದಿಂದ ನೀರು ತಂದವಳು
ನನ್ನೊಳಗೆ ಅಂಬೆಗಾಲಿಡುತ್ತಿರುವ ಮನುಷ್ಯ ಕೂಸಿಗೆ ಕುಲಾವಿ ಹೊಲೆಯುತ್ತಾಳೆ.
ಈಗೀಗ ನಾನು ಗೋಡೆ ಹಿಡಿದು ನಿಂತು, ಒಬ್ಬನೇ ನಡೆಯುವುದನ್ನು ಕಲಿತಿದ್ದೇನೆ.